ಕಾಸರಗೋಡು, ಜು 05 (DaijiworldNews/MS): ದೋಣಿ ದುರಂತದಲ್ಲಿ ಸಮುದ್ರಪಾಲಾಗಿದ್ದ ಮೂವರ ಮೃತದೇಹ ಜು.05 ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಕಾಸರಗೋಡಿನ ಕಿಯೂರಿನಲ್ಲಿ ಭಾನುವಾರ ಬೆಳಿಗ್ಗೆ ಫೈಬರ್ ದೋಣಿ ಮಗುಚಿ ಮೂವರು ನಾಪತ್ತೆಯಾಗಿದ್ದು , ನಾಲ್ವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದರು.
ನಾಪತ್ತೆಯಾಗಿದ್ದ ಕಸಬಾ ತೀರದ ಸಂದೀಪ್ ( 34 ) , ರತೀಶ್ ( 35) ಮತ್ತು ಕಾರ್ತಿಕ್ (22) ಇವರ ಮೃತದೇಹ ಸೋಮವಾರ ಬೆಳಗ್ಗೆ ಬೇಕಲ ಕೋಟಿಕುಳಂ ತೀರದಲ್ಲಿ ಪತ್ತೆಯಾಗಿದೆ . ಮೃತದೇಹಕ್ಕಾಗಿ ಭಾನುವಾರ ರಾತ್ರಿ ತನಕ ಶೋಧ ನಡೆಸಲಾಗಿತ್ತು .
ಭಾನುವಾರ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ದುರಂತ ನಡೆದಿತ್ತು . ಕಸಬಾ ತೀರದಿಂದ ಆಂಜನೇಯ ಎಂಬ ಫೈಬರ್ ದೋಣಿ ಯಲ್ಲಿ ಏಳು ಮಂದಿ ಮೀನುಗಾರಿಕೆಗೆ ತೆರಳಿದ್ದು , ಕಿಯೂರು ಸಮೀಪ ಸಮುದ್ರ ದಲ್ಲಿ ಅಲೆಗಳ ಅಬ್ಬರಕ್ಕೆ ದೋಣಿ ಮಗುಚಿ ಬಿದ್ದು ಈ ಘಟನೆ ನಡೆದಿತ್ತು . ನಾಲ್ವರನ್ನು ಇನ್ನೊಂದು ದೋಣಿಯಲ್ಲಿದ್ದ ಹಾಗೂ ಸ್ಥಳೀಯ ಮೀನುಗಾರರು ರಕ್ಷಿಸಿದ್ದರು . ಅಡ್ಕತ್ತಬೈಲ್ ಬೀಚ್ ನ ಬಿ . ಮನಿಕುಟ್ಟನ್ ( 36) , ಕೋಟಿಕುಳಂ ಕಡಪ್ಪುರದ ರವಿ ( 22) , ನೆಲ್ಲಿಕುಂಜೆಯ ಶಶಿ ( 35) ಮತ್ತು ಕಸಬಾ ದ ಶಿಬಿನ್ ( 23) ಅಪಾಯದಿಂದ ಪಾರಾಗಿದ್ದರು . ದುರಂತ ಬಳಿಕ ಸ್ಥಳೀಯ ಮೀನುಗಾರರು , ಕರಾವಳಿ ಪೊಲೀಸರು , ಅಗ್ನಿಶಾಮಕ ದಳದ ಸಿಬಂದಿಗಳು ಹುಡುಕಾಟ ನಡೆಸಿದ್ದು , ರಾತ್ರಿ ತನಕ ಶೋಧ ಮುಂದುವರಿದಿತ್ತು .
ಈ ನಡುವೆ ಇಂದು ಬೆಳಿಗ್ಗೆ ಮೂವರ ಮೃತದೇಹ ಕೋಟಿಕುಳಂ -ತೃಕ್ಕನ್ನಾಡ್ ನಡುವಿನ ತೀರದಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ . ಮೃತದೇಹವನ್ನು ಗಮನಿಸಿದ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದು , ಸ್ಥಳಕ್ಕೆ ಆಗಮಿಸಿದ ಬೇಕಲ ಹಾಗೂ ಕರಾವಳಿ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದು , ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ