ಕಾರ್ಕಳ, ಜು 04 (DaijiworldNews/PY): "ಸಾರ್ವಜನಿಕರು ತಮ್ಮ ಸಮಸ್ಯೆಗಳೊಂದಿಗೆ ನಮ್ಮ ಬಳಿ ಬಂದಾಗ ಆ ಎಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವ ನೋವು ನನಗಿದೆ, ಆದರೆ ಭರವಸೆ ಇಟ್ಟು ಬಂದವರ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ" ಎಂದು ಸೇವಾ ಭರ್ತಿಹೊಂದಿ ವರ್ಗಾವಣೆಗೊಂಡ ಕಾರ್ಕಳ ತಹಶೀಲ್ದಾರ ಪುರಂದರ ಹೆಗ್ಡೆ ಹೇಳಿದರು.
ಅವರು ಭಾನುವಾರ ತಮ್ಮ ಕಛೇರಿಯಲ್ಲಿ ಪುರಸಭೆಯ ಸದಸ್ಯರು ಹಮ್ಮಿಕೊಂಡ ಗೌರವಾರ್ಪಣೆ ಮತ್ತು ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.
"ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರ ಗರಿಷ್ಠ ಸೇವೆ ಸಲ್ಲಿಸಿದ್ದೇವೆ ಎನ್ನುವ ತೃಪ್ತಿ ಇದೆ. ಕಾರ್ಕಳದ ಜನರು ಶಾಂತಿ ಪ್ರಿಯರು ನಮ್ಮ ಸೇವೆಯಲ್ಲಿ ಸಹಕರಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ಎಂದೂ ಮರೆಯಲು ಸಾಧ್ಯವಿಲ್ಲ" ಎಂದರು.
ಪುರಸಭಾ ಸದಸ್ಯರಾದ ಶುಭದರಾವ್, ಆಶ್ಫಕ್ ಅಹ್ಮದ್, ಪ್ರತಿಮಾ ರಾಣೆ ಅಭಿನಂದನಾ ಮಾತುಗಳನ್ನಾಡಿ ತಮ್ಮ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ಅಧಿಕಾರ ಸ್ವೀಕರಿಸಿದ ಪ್ರಕಾಶ್ ಮಾರಬಳ್ಳಿ ಅವರಿಗೆ ಪುರಸಭಾ ಸದಸ್ಯರು ಹೂ ನೀಡಿ ಸ್ವಾಗತಿಸಿದರು.
ಪುರಸಭೆಯ ಸದಸ್ಯರಾದ ಸೀತಾರಾಮ್, ರೆಹಮತ್ ಶೇಖ್, ಪ್ರಭಾ ಕಿಶೋರ್, ಸೋಮನಾಥ್, ಕಂದಾಯ ನಿರೀಕ್ಷಕ ಶಿವಪ್ರಸಾದ್, ಗ್ರಾಮಕಾರಣಿಕ ರಿಯಾಜ್, ಸುಧಾಕರ್ ಕೋಟ್ಯಾನ್ ಉಪಸ್ಥಿತರಿದ್ದರು.
ಶುಭದರಾವ್ ಸ್ವಾಗತಿಸಿ, ಧನ್ಯವಾದವಿತ್ತರು.