ಉಡುಪಿ, ಜು 04 (DaijiworldNews/PY): "ಎತ್ತಿನಹೊಳೆ ಕಾಮಗಾರಿ ಮುಗಿಸಲು ಇನ್ನೂ ಎರಡು ವರ್ಷ ಬೇಕಾಗಬಹುದು. ಬೈರಗೊಂಡಲು ಬಳಿ ಇನ್ನೂ ಭೂ ಸ್ವಾಧೀನ ಆಗಿಲ್ಲ" ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಉಡುಪಿಯ ಕಕ್ಕುಂಜೆಯಲ್ಲಿ ಆಯೋಜಿಸಿದ್ದ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಬೈರಗೊಂಡಲು ಬಳಿ ರಿಸರ್ವಯೇರ್ ನಿರ್ಮಿಸಲು ಇನ್ನೂ ಕೂಡಾ ಭೂಮಿ ಸ್ವಾಧೀನ ಆಗಿಲ್ಲ. ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಮಧ್ಯೆ 5,500 ಎಕರೆ ಜಾಗ ಬೇಕು. ತುಮಕೂರು ಜಿಲ್ಲೆಗೆ ಭೂಮಿಯ ಮೌಲ್ಯ ಕೇವಲ 8 ಲಕ್ಷ ರೂ. ಬರುತ್ತದೆ ಮತ್ತು ದೊಡ್ಡಬಳ್ಳಾಪುರದಲ್ಲಿ ಭೂಮೌಲ್ಯ ಸುಮಾರು 32 ಲಕ್ಷ ರುಪಾಯಿ ಇದೆ. ಈ ಕಾರಣದಿಂದ ಕೊರಟಗೆರೆ ತಾಲೂಕಿನ ಮಂದಿ ಜಮೀನು ಬಿಟ್ಟು ಕೊಡುತಿಲ್ಲ. ಅಲ್ಲಿ ಸರ್ವೆ ಕಾರ್ಯ ನಡೆಸಲು ಕೂಡಾ ನಮಗೆ ಅವಕಾಶ ಮಾಡುತಿಲ್ಲ. ತುಮಕೂರಿನಲ್ಲಿ ಎಕ್ರೆಗೆ 2 ಲಕ್ಷ ರೂ. ಇದೆ. ಕಾನೂನಿನ ಪ್ರಕಾರ 8 ಲಕ್ಷ ರೂ. ಬರುತ್ತದೆ. ಈ ಗೊಂದಲದಿಂದಾಗಿ ಅಲ್ಲಿ ರೈತರಿಗೆ ಮನವೊಲಿಸಲು ಆಗುತಿಲ್ಲ. ಸದ್ಯ ಮೂರೂ ಜಿಲ್ಲೆಗಳಲ್ಲಿ ಕೆಲಸ ನಡೆಯುತ್ತಾ ಇದೆ. ಇದನ್ನು ಜೋಡಿಸಿ ಮುಂದಿನ 2 ವರ್ಷಗಳಲ್ಲಿ ನೀರು ನೀಡುತ್ತೇವೆ. ನಾನು ಅದೇ ಕ್ಷೇತ್ರದವನು. ಅಕ್ವಾಡೆಕ್ಸ್ ಮಾಡಲು ಒಂದು ವರ್ಷ ಬೇಕಾಗುತ್ತದೆ. ಭೂ ಸ್ವಾಧೀನ ಒಮ್ಮೆಲೆ ಮಾಡಲು ಆಗುವುದಿಲ್ಲ" ಎಂದರು.
"ಕರಾವಳಿಯಲ್ಲಿ ವಾರಾಹಿ ಯೋಜನೆಯ ಬಳಿಕ ಇತರ ಯೋಜನೆಗಳಿಗೆ ಈ ಭಾಗದಲ್ಲಿ ಕೈಗೊಳ್ಳುವ ಸಂಭವ ಇಲ್ಲ. ಇಲ್ಲಿಂದ ನೀರು ತೆಗೆದುಕೊಂಡು ಹೋಗುತ್ತೆವೆ. ಪಶ್ಚಿಮವಾಹಿನಿಯಲ್ಲಿ ಸಮಗ್ರ ಯೋಜನೆ ಮಾಡಿ ವೆಂಟೆಡ್ ಡ್ಯಾಂಗಳನ್ನು ಮಾಡಲಾಗುತ್ತಿದೆ. ಇದರ ಮುಖಾಂತರ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪೋಲಾಗುವ ನೀರನ್ನು ಅಂತರ್ಜಲ ಅಭಿವೃದ್ದಿಗೆ ಬಳಕೆಯಾಗುವಂತೆ ಯೋಜನೆ ರೂಪಿಸಲಾಗಿದೆ. ಇದರಿಂದ ನೀರಾವರಿಗೂ ಸಹಾಯವಾಗಲಿದೆ" ಎಂದರು.
ಮೇಕೆದಾಟು ವಿಚಾರದಲ್ಲಿ ವಿಷಯ ಕೋರ್ಟ್ನಲ್ಲಿ ಇರುವುದರಿಂದ ನಾನು ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.
ಇನ್ನು ಡಿಕೆಶಿ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುವವರಿಗೆ ಸ್ವಾಗತ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಎಲ್ಲಾ ಪಕ್ಷಗಳಿಗೂ ಪಕ್ಷ ವಿಸ್ತರಣೆ ಮಾಡುವ ಅವಕಾಶವಿದೆ. ಇದರಂತೆಯೇ ಡಿಕೆಶಿ ಹೇಳಿರಬಹುದು. ಬಿಜೆಪಿಗೂ ಯಾರು ಬೇಕಾದರೂ ಬರಬಹುದು. ಅಲ್ಲಿಯವರು ನಮ್ಮ ಪಕ್ಷಕ್ಕೆ ಬಂದರೂ ನಾವು ಸ್ವಾಗತಿಸುತ್ತೇವೆ. ಕೊರೊನಾ ಲಸಿಕೆ ವಿಷಯದಲ್ಲಿ ಮೋದಿಯವರನ್ನು ಟೀಕೆ ಮಾಡಿದರೆ ಒಳ್ಳೆಯದಾಗಲ್ಲ. 80 ಕೋಟಿ ಜನರಿಗೆ ಉಚಿತ ವ್ಯಾಕ್ಸಿನ್ ಕೊಡುತ್ತೇವೆ ಎಂದು ಮಾಡಿರುವ ತೀರ್ಮಾನಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಕರ್ನಾಟಕದಲ್ಲಿ ವ್ಯಾಕ್ಸಿನ್ಗಾಗಿ 2,000 ಕೋಟಿ ಮೀಸಲಿಡಲಾಗಿದೆ. ನವೆಂಬರ್ ತಿಂಗಳ ತನಕ ಆಹಾರ ಧಾನ್ಯಗಳನ್ನು ಒದಗಿಸಿದ್ದಾರೆ. ಟೀಕೆ ಮಾಡುವುದು ವಿರೋಧ ಪಕ್ಷದ ಕರ್ತವ್ಯ. ದಿಢೀರ್ ಎಂದು ವ್ಯಾಕ್ಸಿನ್ ಉತ್ಪಾದಿಸಲು ಆಗುವುದಿಲ್ಲ" ಎಂದರು.
ರಮೇಶ್ ಜಾರಕಿಹೊಳಿ ಪತ್ರಿಕಾಗೋಷ್ಠಿ ವಿಷಯದಲ್ಲಿ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ ಅವರು, "ಜಾರಕಿಹೊಳಿ ಅವರಿಗೆ ಪಕ್ಷದ ಕಡೆಯಿಂದ ಯಾವುದೇ ತೊಂದರೆ ಮಾಡಿಲ್ಲ. ಇದೊಂದು ಆಕಸ್ಮಿಕ ಘಟನೆಗೆ ಅವರು ಬಲಿಯಾಗಿದ್ದಾರೆ. ಅವರ ಬಗ್ಗೆ ನಮಗೆ ಅನುಕಂಪ ಇದೆ. ನೈತಿಕವಾಗಿ ಅವರು ರಾಜೀನಾಮೆ ನೀಡಿದ್ದಾರೆ. ಸಮ್ಮತಿಸಿ ನಡೆಸಿದ ಸಂಭೋಗ ಅಪರಾಧ ಅಲ್ಲ ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಆ ಹೆಣ್ಣು ಮಗಳು ಇಚ್ಛೆ ಪಟ್ಟು ಹೋಗಿರುವ ಹಾಗೆ ಕಾಣುತ್ತಿದೆ. ಹೀಗಾಗಿ ಶಿಕ್ಷೆ ಆಗುವುದಿಲ್ಲ ಎಂಬುವುದು ನನ್ನ ಭಾವನೆ" ಎಂದು ಅಭಿಪ್ರಾಯಪಟ್ಟರು.