ಕಾರ್ಕಳ, ಜು 04 (DaijiworldNews/PY): ಇಂಡಿಯನ್ ರೆಡ್ ಕ್ರಾಸ್ ಕಾರ್ಕಳ ಘಟಕದ ವತಿಯಿಂದ ರಾಷ್ಟ್ರೀಯ ವೈದ್ಯರ ದಿನ ಆಚರಣೆಯನ್ನು ಡಾ. ಕೆ.ಆರ್. ಜೋಶಿ ಕ್ಲಿನಿಕ್ನಲ್ಲಿ ಆಚರಿಸಲಾಯಿತು.
ಅಧ್ಯಕ್ಷ ಡಾಕ್ಟರ್ ಕೆ.ಆರ್. ಜೋಶಿ ಮಾತನಾಡಿ, "ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಶ್ರೇಷ್ಠ ವೈದ್ಯಕೀಯ ಸೇವೆ ನೀಡಿದ ವೈದ್ಯರಾದ ಡಾ. ಬಿ.ಸಿ.ರಾಯ್ ಅವರ ನೆನಪಿಗಾಗಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ತಮ್ಮ ಜೀವದ ಹಂಗು ತೊರೆದು ಜನರ ಆರೋಗ್ಯದ ಜವಾಬ್ದಾರಿಯನ್ನು ಕಾಪಾಡುವ, ರಕ್ಷಿಸುವ ಎಲ್ಲಾ ವೈದ್ಯರಿಗೆ ನಾವು ಕೃತಜ್ಞರಾಗಿರೋಣ" ಎಂದು ಎಲ್ಲಾ ವೈದ್ಯರಿಗೆ ಶುಭಕೋರಿದರು.
ರೆಡ್ ಕ್ರಾಸ್ ವತಿಯಿಂದ ಡಾಕ್ಟರ್ ಕೆ. ಆರ್ ಜೋಶಿ ಮತ್ತು ಎಲ್ಲಾ ವೈದ್ಯರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಗೆ ನೂತನ ಸದಸ್ಯರಾಗಿ ಜೈನ ಮತ್ತು ಕುಮಾರಯ್ಯ ಹೆಗಡೆ ಅವರನ್ನು ಸೇರಿಸಲಾಯಿತು. ಅತಿಥಿಗಳಾಗಿ ಕಾರ್ಕಳ ಜೆಸಿ ಅಧ್ಯಕ್ಷ ಜೆಸಿ ಸಂತೋಷ್ ಕುಮಾರ್ ರೆಂಜಾಳ ಅವರು ವೈದ್ಯರುಗಳಿಗೆ ಅಭಿನಂದಿಸಿ ಶುಭಕೋರಿದರು.
ಈ ವೇಳೆ ವಿಘ್ನೇಶ್ ಮತ್ತು ಕರ್ತವ್ಯ ಜೈನ್ ಅವರು ಮಾತನಾಡಿ, ವೈದ್ಯರ ಸೇವೆಯನ್ನು ಶ್ಲಾಘಿಸಿ ಕೃತಜ್ಞತೆ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಶೇಖರ್ ಎಚ್. ಕಾರ್ಯಕ್ರಮ ನಿರ್ವಹಿಸಿದರು. ಶಶಿಕಲಾ ಹೆಗಡೆ ವಂದನಾರ್ಪಣೆಗೈದರು.