ಮಂಗಳೂರು, ಜು 03 (DaijiworldNews/MS): ನಿಂಬೆಹಣ್ಣು ತುಂಬಿದ ವಾಹನದಲ್ಲಿ ಗಾಂಜಾ ಮರೆಮಾಚಿ ಸಾಗಿಸುತ್ತಿದ್ದ ಇಬ್ಬರನ್ನು ಜೂ. 2 ರ ಶುಕ್ರವಾರ ರಾತ್ರಿ 8 ಗಂಟೆಗೆ ಬಂಧಿಸಲಾಗಿದ್ದು , ಇವರಿಂದ 20 ಪ್ಯಾಕೆಟ್ಗಳ 40 ಕೆ.ಜಿ ಗಾಂಜಾವನ್ನು ಮಂಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಕಾಸರಗೋಡು ಕಂಬಲ್ಲೂರು ಚಿತ್ತಾರಿಕಲ್ ನ ವಳಪ್ಪಿಲ್ ಪುಮ್ಕೊಡೆ ಭೀಮನದಿಯ ಶಿಹಾಬುದ್ದೀನ್ (32) ಹಾಗೂ ಚಿತ್ತಾರಿಕಲ್ ತೆಕ್ಕೆಪೀಡಿಕಾಯಿಲ್, ಕಾಡುಮೆನಿ ಮಾನಕಟ್ಟೆಯ ಲತೀಫ್( 38) ಎಂದು ಗುರುತಿಸಲಾಗಿದೆ.
ಉರ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕೊಟ್ಟಾರ ಚೌಕಿ ಚೆಕ್ ಪೋಸ್ಟ್ ನಲ್ಲಿ ಉಡುಪಿ ಕಡೆಯಿಂದ ಮಹೀಂದ್ರಾ ಪಿಕ್ ಅಪ್ ವಾಹನವನ್ನು ತಪಾಸಣೆಗೊಳಪಡಿಸಿದಾಗ ಪ್ಲಾಸ್ಟಿಕ್ ಟ್ರೇಗಳಲ್ಲಿ ತುಂಬಿದ ಲಿಂಬೆ ಹಣ್ಣುಗಳ ಮಧ್ಯೆ ತಲಾ 2 ಕೆ.ಜಿ ತೂಕದ 20 ಗಾಂಜಾ ಪ್ಯಾಕೇಟ್ ಗಳ ಒಟ್ಟು 40 ಕೆಜಿ ಜೋಡಿಸಿ ಅಕ್ರಮವಾಗಿ ಸಾಗಾಟ ಮಾಡುವುದು ಪತ್ತೆಯಾಗಿದೆ.
ಆರೋಪಿಗಳು ಆಂಧ್ರಪ್ರದೇಶದಿಂದ ಕಾಸರಗೋಡಿಗೆ ಗಾಂಜಾ ಸಾಗಾಟ ಮಾಡುತ್ತಿದ್ದು, ಕೃತಕ್ಕೆ ಬಳಸಿದ ವಾಹನ ಸಮೇತ 11,17000 rರೂ. ಮೌಲ್ಯದ ಸೋತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಕಾನೂನು ಸುವ್ಯವಸ್ಥೆ ಹರಿರಾಮ್ ಶಂಕರ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದು,ಈ ಸಂದರ್ಭ ಎಸಿಪಿ ಸೆಂಟ್ರಲ್ ಪಿಎ ಹೆಗ್ಡೆ ಉಪಸ್ಥಿತರಿದ್ದರು.