ಕಾಸರಗೋಡು, ಜು 03 (DaijiworldNews/MS): ಗಲ್ಫ್ ಪ್ರದೇಶದಿಂದ ದೇಶಕ್ಕೆ ಚಿನ್ನವನ್ನು ನಾನಾ ವಿಧದಲ್ಲಿ ಕಳ್ಳಸಾಗಣೆ ಮಾಡಲು ಹೋಗಿ ಹಲವಾರು ಜನರು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಆಗಾಗ್ಗೆ ಸಿಕ್ಕಿಬೀಳುತ್ತಿರುತ್ತಾರೆ. ಇಲ್ಲೊಬ್ಬ ಬಂಗಾರ ಕಳ್ಳ ಸಾಗಣೆಗೆ ಹೊಸ ದಾರಿ ಕಂಡುಕೊಂಡಿದ್ದು, ಇತನ ಉಪಾಯ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ. ಆದರೆ, ಎಷ್ಟೇ ಉಪಾಯ ಮಾಡಿದರೂ ಆತ ವಿಮಾನ ನಿಲ್ದಾಣದಲ್ಲಿನ ಕಸ್ಟಮ್ಸ್ ಅಧಿಕಾರಿಗಳ ಕೈಯಿಂದ ಪಾರಾಗಲು ಸಾಧ್ಯವಾಗಿಲ್ಲ.!
ಅಧಿಕಾರಿಗಳಿಗೆ ತಿಳಿಯದಂತೆ ಸುಲಭವಾಗಿ ಕಳ್ಳಸಾಗಣೆ ಮಾಡಬಹುದೆಂದು ಅಂದಾಜಿಸಿದ್ದ ಉಪ್ಪಳದ ನಿವಾಸಿ ಶಾಫಿ(31) ಕರಿಪುರ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತ ಚಿನ್ನ ಲೇಪಿತ ಪ್ಯಾಂಟ್ ಧರಿಸಿದ್ದು, ಸುಮಾರು ೨೦ ಲಕ್ಷ ಮೌಲ್ಯದ ಅರ್ಧ ಕಿಲೋ ಚಿನ್ನವನ್ನು ಲೇಪಿಸಿರುವುದಾಗಿ ಅಂದಾಜಿಸಲಾಗಿದೆ. ಇಂತಹ ಪ್ರಕರಣ ಕರಿಪುರ ವಿಮಾನ ನಿಲ್ದಾಣದ ಇತಿಹಾಸದಲ್ಲಿ ಮೊದಲ ಬಾರಿಗೆ ವರದಿಯಾಗಿದೆ.
ಪ್ಯಾಂಟ್ ಒಳಗೆ ದ್ರವರೂಪದ ಚಿನ್ನವನ್ನು ಲೇಪಿಸಿ ಅಧಿಕಾರಿಗಳು ಟ್ರಿಕ್ ಅನ್ನು ಸುಲಭವಾಗಿ ಗುರುತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಲೇಪಿತ ಚಿನ್ನದ ಬಟ್ಟೆ ಮೇಲೆ ಮತ್ತೊಂದು ಲೈನಿಂಗ್ ಬಟ್ಟೆಯನ್ನು ಹೊಲಿದು ಸೇರಿಸಲಾಗಿದೆ. ಎಷ್ಟೇ ಖತರ್ ನಾಕ್ ಉಪಾಯ ಮಾಡಿದರೂ ಸುಲಭದಲ್ಲಿ ಅಧಿಕಾರಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.