ಮಂಗಳೂರು, ಜು.02 (DaijiworldNews/HR): ಉಳ್ಳಾಲದಲ್ಲಿ ಸುಮಾರು ಒಂದು ಕೋಟಿ ರೂ.ಗಳಿಗೂ ಅಧಿಕ ಮೊತ್ತದಲ್ಲಿ ಚಲನಚಿತ್ರ ನಟ ಸೋನು ಸೂದ್ ಅವರ ಶೇ 80ರ ಕೊಡುಗೆಯೊಂದಿಗೆ ಶೇ.20 ಜಿಲ್ಲಾಡಳಿತದ ಆರ್ಥಿಕ ನೆರವಿನೊಂದಿಗೆ ಆಕ್ಸಿಜನ್ ಉತ್ಪಾದನಾ ಕೇಂದ್ರ ನಿರ್ಮಾಣವಾಗಲಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಈ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟಕ ಆರಂಭಿಸಲಾಗುವುದು. ಸುಮಾರು ಒಂದು ಕೋಟಿ ರೂಗಳಿಗೂ ಅಧಿಕ ಮೊತ್ತದಲ್ಲಿ ಆಕ್ಸಿಜನ್ ಉತ್ಪಾದನಾ ಕೇಂದ್ರ ನಿರ್ಮಾಣವಾಗಲಿದೆ" ಎಂದು ಅವರು ತಿಳಿಸಿದರು.
"ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ 2.10 ಕೋಟಿ ರೂ ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಿರ್ಮಾಣಕ್ಕೆ ಸರಕಾರದಿಂದ ಮಂಜೂರಾತಿ ದೊರೆತಿದೆ. ಬಂಟ್ವಾಳ ಹೊರತು ಪಡಿಸಿದರೆ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಈ ಶಾಲೆ ಆರಂಭವಾಗಲಿದೆ" ಎಂದು ತಿಳಿಸಿದರು.
ಇನ್ನು "ಚೆಂಬುಗುಡ್ಡೆ ಹಿಂದೂ ರುದ್ರ ಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲು ಇನ್ಫೋಸಸ್ ಸಂಸ್ಥೆ ಮುಂದೆ ಬಂದಿದೆ. ಇದರ ಸ್ಥಳ ನಿಗದಿ ಬಗ್ಗೆ ಅಲ್ಲಿ ಸ್ಥಳೀಯ ಸಮಿತಿಯ ತೀರ್ಮಾನ ಮುಖ್ಯವಾಗುತ್ತದೆ. ಅವರ ಒಪ್ಪಿಗೆಯ ಪ್ರಕಾರ ಅಲ್ಲಿ ವಿದ್ಯುತ್ ಚಿತಗಾರ ಆಗಬೇಕೆ ಬೇಡವೇ ಎನ್ನುವುದು ತೀರ್ಮಾನವಾಗಲಿದೆ ನಾನು ಯಾರ ಮೇಲೂ ಒತ್ತಡ ಹೇರಿಲ್ಲ. ಇಂತಹ ವಿಚಾರದಲ್ಲಿ ರಾಜಕೀಯ ಮಾಡಬಾರದು" ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.