ಉಳ್ಳಾಲ, ಜು 02 (DaijiworldNews/MS): ರಸ್ತೆ ಬದಿ ಪಾರ್ಕ್ ಮಾಡಲಾಗಿದ್ದ ಆಂಬ್ಯುಲೆನ್ಸ್ ನ ಗಾಜು ಒಡೆದು ಒಳಗಿದ್ದ ಪರಿಕರಗಳನ್ನು ದೋಚಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಬಳಿ ನಡೆದಿದೆ.
ಮಂಗಳೂರು ಗಂಗಾಧರ್ ಅವರಿಗೆ ಸೇರಿದ ಶ್ರೀ ಗಣೇಶ್ ಆಂಬ್ಯುಲೆನ್ಸ್ ಗೆ ಹಾನಿ ನಡೆಸಿ ಕಳವು ನಡೆಸಲಾಗಿದೆ. ಮುಕ್ಕಚ್ಚೇರಿ ನಿವಾಸಿ ರಹೀಂ ಎಂಬವರು ಚಲಾಯಿಸುತ್ತಿದ್ದ ಆಂಬ್ಯುಲೆನ್ಸ್ ಅನ್ನು ಅವರ ಮನೆ ಸಮೀಪ ನಿಲ್ಲಿಸಿದ್ದರು. ನಿನ್ನೆ ತಡರಾತ್ರಿ 8.30 ಸುಮಾರಿಗೆ ಆಂಬ್ಯುಲೆನ್ಸ್ ನಿಲ್ಲಿಸಿ ಚಾಲಕ ರಹೀಂ ತೆರಳಿದ್ದು, ಇಂದು ಬೆಳಗ್ಗೆ ಕರ್ತವ್ಯಕ್ಕೆ ತೆರಳುವ ಸಂದರ್ಭ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ
ಆಂಬ್ಯುಲೆನ್ಸ್ ನ ಸುತ್ತ ಗಾಜು ಒಡೆದಿರುವ ದುಷ್ಕರ್ಮಿಗಳು ಬೆಳೆಬಾಳುವ ಸೈರನ್ ಆಂಪ್ಲಿಫೈಯರ್, ಆಡಿಯೋ ಸ್ಟಿರಿಯೋ ದೋಚಿದ್ದು, ಇದರೊಂದಿಗೆ ಆಕ್ಸಿಜನ್ ರೆಗ್ಯುಲೇಟರ್ , ಪಿಪಿಇ ಕಿಟ್ ಗಳನ್ನು ಹೊರೆಗೆಸೆದು ದಾಂಧಲೆ ನಡೆಸಿ ಕಳವು ನಡೆಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊರೊನಾ ಸೋಂಕಿತರ ಸೇವೆಯಲ್ಲಿ 24 ಗಂಟೆಗಳ ಕಾಲ ಜಿಲ್ಲೆಯಾದ್ಯಂತ ಶ್ರೀ ಗಣೇಶ್ ಆಂಬ್ಯುಲೆನ್ಸ್ ತೊಡಗಿಸಿಕೊಂಡಿದೆ.