ಮೂಡುಬಿದಿರೆ, ಜು 02 (DaijiworldNews/PY): ಮೂಡುಬಿದಿರೆಯ ನಿಡ್ಡೋಡಿಯಲ್ಲಿ ರಾಜ್ಯ ಸರ್ಕಾರ ಬೃಹತ್ ಸೀ ಫುಡ್ ಘಟಕ ಸ್ಥಾಪಿಸಲು ಮುಂದಾಗಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯ ಮೀನುಗಾರಿಕಾ ಸಚಿವ ಅಂಗಾರ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಬೃಹತ್ ಸೀಫುಡ್ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಸ್ಥಳೀಯರಿಗೆ ಮಾಹಿತಿ ನೀಡದೇ ನಿಡ್ಡೋಡಿಗೆ ಪರಿಶೀಲನೆ ನಡೆಸಲು ಭೇಟಿ ನೀಡಿದ್ದು, ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ನೆರೆದ ಸ್ಥಳೀಯರು ಸಚಿವರು ಹಾಗೂ ಶಾಸಕರ ವಿರುದ್ದ ಆಕ್ರೋಶಗೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ನಿಡ್ಡೋಡಿ ನಿವಾಸಿ ದಿನೇಶ್, "ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಅಧಿಕಾರಿಗಳು ಚರ್ಚಿಸಿಲ್ಲ. 200ಕ್ಕೂ ಅಧಿಕ ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸುತ್ತಿವೆ. ಈ ಯೋಜನೆಯ ಮುಖೇನ ಜನರ ದಾರಿ ತಪ್ಪಿಸುವ ಕೆಲಸವಾಗಬಾರದು. ಹಾಗಾಗಿ ಸ್ಥಳೀಯರ ಜೊತೆ ಸಭೆ ನಡೆಸಿ ನಮ್ಮ ಅನುಮಾನಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇವೆ" ಎಂದಿದ್ದಾರೆ.
ಇನ್ನೊರ್ವ ನಿವಾಸಿ ಮಾತನಾಡಿ, "ಇಲ್ಲಿ ಕಾರ್ಖಾನೆ ತೆರೆಯಲು ಅವಕಾಶ ನೀಡಿದ್ದಲ್ಲಿ, ಇಲ್ಲಿರುವ ಬಾವಿಗಳು ಹಾಗೂ ಕೊಳಗಳು ವಿಷಯುಕ್ತವಾಗುವ ಆತಂಕವಿದೆ. ಕಾರ್ಖಾನೆಯಿಂದ ಹೊರಸೂಸುವ ಗಾಳಿ ಕೆಟ್ಟ ವಾಸನೆಯಿಂದ ಕೂಡಿದ್ದು, ಇಲ್ಲಿ ವಾಸಿಸಲು ಅಸಾಧ್ಯ. ಈ ಸಮಸ್ಯೆಗಳ ನಿವಾರಿಸಿದ್ದಲ್ಲಿ, ಕಾರ್ಖಾನೆ ಸ್ಥಾಪಿಸಲು ನಮ್ಮ ವಿರೋಧವಿಲ್ಲ" ಎಂದು ಹೇಳಿದ್ದಾರೆ.
"ಈ ರೀತಿಯ ಯೋಜನೆ ಮಂಗಳೂರಿನಲ್ಲಿಯೂ ಬಂದಿತ್ತು. ಆದರೆ, ಸ್ಥಳೀಯರಿಗೆ ಯಾವುದೇ ಉದ್ಯೋಗಾವಕಾಶ ಸಿಕ್ಕಿಲ್ಲ. ಅಲ್ಲಿ ಬೇರೆ ರಾಜ್ಯದವರು ಉದ್ಯೋಗ ಪಡೆದುಕೊಂಡಿದ್ದಾರೆ. ಮಾಲಿನ್ಯ ಸಮಸ್ಯೆಯೂ ನಿವಾರಣೆಗಾಗಿಲ್ಲ. ನಾವು ಇಲ್ಲಿಯೂ ಅದೇ ರೀತಿಯಾಗಲು ಅವಕಾಶ ನೀಡುವುದಿಲ್ಲ. ಪದವಿ ಶಿಕ್ಷಣ ಪಡೆದುಕೊಂಡವರು ನಮ್ಮ ಬಳಿ ಸಾಕಷ್ಟು ಮಂದಿ ಇದ್ದಾರೆ. ಇಲ್ಲಿ ಕಾರ್ಖಾನೆ ಸ್ಥಾಪನೆ ಆದಲ್ಲಿ ಅವರಿಗೆ ಉದ್ಯೋಗಾವಕಾಶ ನೀಡಬೇಕು" ಎಂದಿದ್ದಾರೆ.
ಬಳಿಕ ಪ್ರತಿಕ್ರಿಯೆ ನೀಡಿ ಸಚಿವರು ಹಾಗೂ ಅಧಿಕಾರಿಗಳು, "ಇಲ್ಲಿ ಕಾರ್ಖಾನೆ ಸ್ಥಾಪನೆಯಾದಲ್ಲಿ ಸ್ಥಳೀಯರಿಗೆ ಯಾವುದೇ ರೀತಿಯಾದ ಸಮಸ್ಯೆಯಾಗುವುದಿಲ್ಲ. 1,500 ಉದ್ಯೋಗಾವಕಾಶಗಳನ್ನು ಸ್ಥಳೀಯರಿಗೆ ನೀಡಲಾಗುತ್ತದೆ. ಸ್ಥಳೀಯರಿಗೆ ಆದ್ಯತೆಯ ಮೇರೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲಾಗುತ್ತದೆ" ಎಂದು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಇತ್ತೀಚೆಗೆ ಪ್ರಧಾನ್ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಯೋಜನೆ ಘೋಷಣೆ ಮಾಡಿದ್ದು, "ಮೀನು ಆಹಾರ ಸಂಸ್ಕರಣೆ ಸೇರಿದಂತೆ ಮೀನುಗಳ ಸಂರಕ್ಷಣೆ ಹಾಗೂ ಮೌಲ್ಯವರ್ಧನೆಗೆ ಈ ಯೋಜನೆ ಸೌಲಭ್ಯಗಳನ್ನು ನೀಡಲಿದೆ" ಎಂದಿದ್ದರು.