ಬಂಟ್ವಾಳ, ಜು 02 (DaijiworldNews/MS): ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸುತ್ತಿರುವ ಬಾಲಿವುಡ್ ನಟ ಸೋನು ಸೂದ್, ಕೊರೊನಾ ಸಂಕಷ್ಟದ ಬಳಿಕ ದೇಶದ ಜನತೆಯ ಪಾಲಿನ ಹೀರೋ ಆಗಿದ್ದಾರೆ ಕಳೆದ ವರ್ಷ ಕೊರೋನಾ ಲಾಕ್ಡೌನ್ ಆರಂಭವಾದ ನಂತರ ಅನೇಕ ಜನ ಸಾಮಾನ್ಯರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಅದು ಮುಂದುವರಿಸಿದ್ದಾರೆ ಕೂಡಾ. ಈ ಹಿನ್ನೆಲೆ ಜನ ಸಾಮಾನ್ಯರು ಸೋನು ಸೂದ್ ಅವರನ್ನು ನಿಜವಾದ ದೇವರು, ಹೀರೋ ಎಂದೆಲ್ಲ ಕೊಂಡಾಡುತ್ತಿದ್ದಾರೆ.
ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಇದಲ್ಲದೆ ಹಾಸಿಗೆಗಳು, ಆಮ್ಲಜನಕಗಳ ಮೂಲಕ ಲಕ್ಷಾಂತರ ಮಂದಿಗೆ ತಮ್ಮಿಂದಾದ ಸಹಾಯ ಮಾಡಿದ್ದಾರೆ. ಸೋನು ಸೂದ್ ಅವರ ಕೆಲಸ ಹಲವಾರು ಯುವಕರಿಗೆ ಮತ್ತು ಅವರ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದು, ಹಾಗಾಗಿ ಅನೇಕರು ಸೋನು ಸೂದ್ ಮಾಡಿರುವ ಸಹಾಯವನ್ನು ಕೊಂಡಾಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸದ್ಯ ಕರಾವಳಿಯಲ್ಲೂ ನಟ ಸೋನು ಸೂದ್ ಅವರ ಅಪ್ಪಟ ಅಭಿಮಾನಿಯೊಬ್ಬರಿದ್ದು , ಅವರ ನಿಸ್ವಾರ್ಥ ಸಹಾಯ ಕಂಡು ಅವರಿಗೆ ವಿಶೇಷ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಬಂಟ್ವಾಳದಲ್ಲಿ ಶ್ರೀ ಟಾಕೀಸ್ ಸ್ಟುಡಿಯೋ ನಡೆಸುತ್ತಿರುವ ಜಕ್ರಿಬೆಟ್ಟುವಿನ ಶ್ರೀಪ್ರಸಾದ್ ಬಂಟ್ವಾಳ ತಮ್ಮ ಕಾರಿನ ಹೊರಭಾಗವನ್ನು ಮರುವಿನ್ಯಾಸ ಮಾಡಿ ಸೋನು ಸೂದ್ ಗಾಗಿ ಅರ್ಪಿಸಿದ್ದಾರೆ. ಇವರ ಕಾರ್ಯಕ್ಕೆ ಸಹೋದರಿ ಶ್ರೀಉಷಾ ಜಗದೀಶ್ ಆಚಾರ್ಯ ಸಾಥ್ ನೀಡಿದ್ದಾರೆ.
ಶ್ರೀ ಪ್ರಸಾದ್ ಬಂಟ್ವಾಳ ತಮ್ಮ ಸ್ನೇಹಿತ ಶಿವ ಬಂಟ್ವಾಳ ಅವರೊಂದಿಗೆ ಚರ್ಚೆ ನಡೆಸಿ , ಲಕ್ಷಾಂತರ ಮಂದಿಗೆ ಸಹಾಯ ಹಸ್ತ ಚಾಚಿದ ತಮ್ಮ ನೆಚ್ಚಿನ ನಟ ಸೋನು ಸೂದ್ ಅವರಿಗಾಗಿ ಏನಾದೊಂದು ಮಾಡಬೇಕು ಎಂದು ಯೋಚಿಸಿ, ಅವರ ಕುರಿತು ಪ್ರಕಟವಾದ ಲೇಖನಗಳನ್ನು ಕಾರಿನ ಮರುವಿನ್ಯಾಸದಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಮಾತ್ರವಲ್ಲದೆ ಸೋನು ಸೂದ್ ಅವರ ಸ್ಲೋಗನ್ "ನಾನು ಇಲ್ಲಿರುವುದು ರಾಜಕೀಯಕ್ಕಾಗಿ ಅಲ್ಲ ಬದಲು ಹೃದಯಗಳನ್ನು ಗೆಲ್ಲಲು " ದೊಡ್ಡದಾಗಿ ಬಳಸಿಕೊಳ್ಳಲು ಯೋಚಿಸಿದರು. ಅದರಂತೆ ಕೊನೆಗೆ ಜೂನ್ 30ರಂದು ಬೆಂಗಳೂರಿನಲ್ಲಿ ಕಾರಿನ ಹೊರಭಾಗವನ್ನು ವಿನ್ಯಾಸ ಸಂಪೂರ್ಣಗೊಳಿಸಲಾಯಿತು.
ನೆಚ್ಚಿನ ನಟನಿಗಾಗಿ ಅರ್ಪಿಸಿದ ಕಾರಿನ ಪೋಟೋಗಳನ್ನು ಶ್ರೀಪ್ರಸಾದ್ ಅವರು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಇವರ ಕೃತಜ್ಞತೆ ಮತ್ತು ಅಭಿಮಾನವನ್ನು ಸೋನು ಸೂದ್ ಕೂಡಾ ಗುರುತಿಸಿ ಖುಷಿಪಟ್ಟಿದ್ದಾರೆ.
ಇನ್ನು ಈ ಕುರಿತು ದಾಯ್ಜಿವಲ್ಡ್ ಜೊತೆ ಮಾತನಾಡಿದ " ಶ್ರೀಪ್ರಸಾದ್ ಬಂಟ್ವಾಳ , ‘ನಾನು ಮತ್ತು ಸಹೋದರಿ ಶ್ರೀ ಉಷಾ ಜಗದೀಶ್ ಆಚಾರ್ಯ ಅವರು, ಸೋನು ಸೂದ್ ಲಾಕ್ ಡೌನ್ ಅವಧಿಯಲ್ಲಿ ನೆರವು ನೀಡಲು ಪ್ರಾರಂಭಿಸುವ ಮೊದಲೇ ಅವರ ಬಹುದೊಡ್ಡ ಅಭಿಮಾನಿಗಳಾಗಿದ್ದೇವು. ಲಾಕ್ಡೌನ್ ಸಮಯದಲ್ಲಿ ಅವರು ಮಾಡಿದ ಕೆಲಸದಿಂದ ನಾವು ಆಶ್ಚರ್ಯಚಕಿತರಾಗಿದ್ದೇವೆ. ದೇಶದ ಪ್ರತಿಯೊಂದು ಮೂಲೆಯಲ್ಲೂ ಸಹಾಯಯಾಚಿಸಿದವರಿಗೆ ನೆರವಾಗಿದ್ದಾರೆ. ಹೀಗಾಗಿ ನಮ್ಮ ನೆಚ್ಚಿನ ನಟನಿಗೆ ಧನ್ಯವಾದ ಹೇಳಲು ನಾವು ಬಯಸಿದ್ದೆವು . ಆದರೆ ಸೋನು ಸೂದ್ ಅವರಿಗೆ ಕೃತಜ್ಞತೆ ಹೇಗೆ ಸಲ್ಲಿಸಬೇಕು ಎಂದು ತಿಲಿಯಲಿಲ್ಲ. ಇದಕ್ಕಾಗಿ ಕೊನೆಗ್ ಯೋಚಿಸಿ ನಮ್ಮ ಕಾರನ್ನು ಅವರಿಗಾಗಿ ಮರು ವಿನ್ಯಾಸಗೊಳಿಸಲು ನಿರ್ಧರಿಸಿದೆವು. ಕಾರಿನ ಹೊರಭಾಗದಲ್ಲಿ ಎಲ್ಲರಿಗೂ ಕಾಣುವಂತೆ ನಾವು ಅವರ ಲೇಖನಗಳು, ಫೋಟೋಗಳು ಮತ್ತು ಅವರ ಸ್ಲೋಗನ್ ಬಳಸಿ ಮಾರ್ಪಡು ಮಾಡಿದೆವು. ನಮ್ಮ ಇಚ್ಚೆಯನ್ನು ಪೂರೈಸಲು ಹಾಗೂ ಸೋನು ಸೂದ್ ಬಗ್ಗೆ ನನ್ನ ಮೆಚ್ಚುಗೆಯನ್ನು ಅವರಿಗೆ ತಲುಪಲು ಸಹಾಯ ಮಾಡಿದ ಚರಣ್, ನಿಖಿಲ್ ಮತ್ತು ಅಭಿ ರಾವ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಶ್ರೀ ಪ್ರಸಾದ್ ಹೇಳಿದ್ದಾರೆ.