ಪುತ್ತೂರು, ಜು 02 (DaijiworldNews/PY): ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.
ಗಾಂಧಿ ಪ್ರತಿಮೆಯ ಕನ್ನಡಕ ತೆಗೆದು ಪ್ರತಿಮೆಯ ತಲೆಗೆ ಇಟ್ಟು ಹಾಗೂ ಪ್ರತಿಮೆಯ ತಲೆಗೆ ಟೀ ಶರ್ಟ್ ಅನ್ನು ಇಟ್ಟು ಅವಮಾನಗೊಳಿಸಿದ್ದಾರೆ.
ಘಟನೆಯ ಬಗ್ಗೆ ಗಾಂಧಿಕಟ್ಟೆ ಸಮಿತಿ ಮಾಹಿತಿ ನೀಡಿದ ಬಳಿಕ, ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಗೋಪಾಲ್ ನಾಯ್ಕ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಗಾಂಧಿ ಪ್ರತಿಮೆ ಈ ಹಿಂದೆ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಪ್ರದೇಶದ ಅಶ್ವತ್ಥ ಮರದ ಬಳಿ ಇತ್ತು. ಪುತ್ತೂರು ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಿದ ವೇಳೆಯೂ ಗಾಂಧಿಕಟ್ಟೆಯನ್ನು ಹಾಗೆಯೇ ಉಳಿಸಲಾಗಿತ್ತು. ಈ ಮಧ್ಯೆ ಗಾಂಧಿ ಕಟ್ಟೆ ಹಾಗೂ ಅಶ್ವತ್ಥ ಮರದ ಸುತ್ತಲೂ ಮಣ್ಣಿನ ಕುಸಿತ ಉಂಟಾಗಿದ್ದು, ಅಪಾಯದ ಸ್ಥಿತಿ ಕಾಣಿಸಿಕೊಂಡಿತ್ತು. ನಂತರ ಅಶ್ವತ್ಥಕಟ್ಟೆ ಹಾಗೂ ಗಾಂಧಿಕಟ್ಟೆಯನ್ನು ರಸ್ತೆಗೆ ಸಮನಾಂತರವಾಗಿ ತಗ್ಗಿಸಿ ನವೀಕರಣಗೊಳಿಸಿ, ಪುನಃ ಗಾಂಧಿ ಪ್ರತಿಮೆಯನ್ನು ಮರುಸ್ಥಾಪಿಸಲಾಗಿತ್ತು. ಆದರೆ, ಇದೀಗ ಕಿಡಿಗೇಡಿಗಳು ಗಾಂಧಿ ಪ್ರತಿಮೆಯನ್ನು ವಿಕೃತಗೊಳಿಸಿದ್ದು, ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುತ್ತಿದ್ದಾರೆ.