ಕಾರ್ಕಳ, ಜು. 01(DaijiworldNews/HR): ಕಂದಾಯ ಸಚಿವ ಆರ್. ಅಶೋಕ್, ಅನ್ಯರ ಬಟ್ಟಲ ನೋಣ ಓಡಿಸುವ ಮೊದಲು ತನ್ನ ಬಟ್ಟಲಿನಲ್ಲಿ ಬಿದ್ದು ಕೊಳೆಯುತ್ತಿರುವ ಹೆಗ್ಗಣವನ್ನು ಮೊದಲು ಹೆಕ್ಕಿ ಬಿಸಾಡಲಿ. ಮನೆಯೊಂದು ಮೂರಲ್ಲ, ನೂರು ಬಾಗಿಲಾಗಿರುವ ಬಿಜೆಪಿ ರಾಜ್ಯದಲ್ಲಿ ಅರಾಜಕತೆಯನ್ನು ಹುಟ್ಟು ಹಾಕಿ, ಈ ಹಿಂದಿನ ಕಾಂಗ್ರೆಸ್ ಸರಕಾರ ಮಾಡಿ ಹೋದ ಅಭಿವೃದ್ಧಿಯ ಕೆಲಸಗಳಿಗೆ ಸುಣ್ಣ ಬಣ್ಣ ಬಳಿದು, ಹೆಸರು ಬದಲಿಸಿ, ಜನರನ್ನು ದಿಕ್ಕು ತಪ್ಪಿಸಿ ಉಸಿರಾಡುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, "ಭ್ರಷ್ಠಾಚಾರದ ಕೂಪವಾಗಿರುವ ಬಿಜೆಪಿ ಹೆಣ್ಣು ಮತ್ತು ಮಣ್ಣಿನ ಹಗರಣಗಳಲ್ಲಿ ಸಿಲುಕಿ ತುಯಿದಾಡುತ್ತಿರುವುದು ಮತ್ತು ತನ್ನ ಪಕ್ಷದವರಿಂದಲೇ ಟೀಕೆಗೊಳಗಾಗಿರುವುದು ಮಾನ್ಯ ಸಚಿವರ ಗಮನಕ್ಕೆ ಬಾರದಿರುವುದು ವಿಪರ್ಯಾಸ" ಎಂದಿದ್ದಾರೆ.
ಇನ್ನು ಮುಂದಿನ ಇಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೋ ಇಲ್ಲವೋ. ಅದನ್ನು ನಿರ್ಣಯಿಸಬೇಕಾದವರು ಈ ರಾಜ್ಯದ ಮತದಾರರು ಹೊರತು ಅಪರದಾರಿಯಲ್ಲಿ ಸರಕಾರ ನಡೆಸಿ ರಾಜಧರ್ಮಕ್ಕೆ ದ್ರೋಹ ಬಗೆದ ಬಿಜೆಪಿಯವರಲ್ಲ. ಬಿಜೆಪಿಯಿಂದ ಕಾಂಗ್ರೆಸ್ ರಾಜಕೀಯದ ನೀತಿಪಾಠವನ್ನು ಕಲಿಯಬೇಕಾಗಿಲ್ಲ ಎಂದು ಹೇಳಿದ್ದಾರೆ.