ಕುಂದಾಪುರ, ಜು 01 (DaijiworldNews/MS): ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘ ದಾವಣಗೆರೆ, ತಾಲೂಕು ಆಡಳಿತದ ಸಹಯೋಗದೊಂದಿಗೆ ಕಂದಾಯ ದಿನಾಚರಣೆ 2021 ಹಾಗೂ ಕಂದಾಯ ಸಚಿವ ಆರ್. ಅಶೋಕ್ರವರ ಜನ್ಮದಿನದ ಪ್ರಯುಕ್ತ ‘ಹಸಿರೋತ್ಸವ' ಕಾರ್ಯಕ್ರಮ ನಡೆಯಿತು. ಇಲ್ಲಿನ ಜೆ.ಎಲ್.ಬಿ. ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಕುಂದಾಪುರದ ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು ಗಿಡ ನೆಡುವ ಮೂಲಕ ಹಸಿರೋತ್ಸವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಬಳಿಕ ಮಾತನಾಡಿದ ಅವರು, ಕಂದಾಯ ಇಲಾಖೆ ಇವತ್ತಿಗೂ ಮಾತೃ ಇಲಾಖೆಯಾಗಿಯೇ ಮುಂದುವರಿಯುತ್ತಿದೆ. ಆಡಳಿತದ ದೃಷ್ಟಿಯಿಂದ ಕೆಲವೊಂದು ಇಲಾಖೆಗಳು ಕಂದಾಯ ಇಲಾಖೆಯಿಂದ ಹೊರಗುಳಿದರೂ ಕೂಡಾ ಕಂದಾಯ ಇಲಾಖೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ವಿಶಾಸಾರ್ಹ ಇಲಾಖೆಯಾಗಿ ಕಂದಾಯ ಇಲಾಖೆ ಕೆಲಸ ನಿರ್ವಹಿಸುತ್ತಿದೆ. ಕಳೆದ 19 ತಿಂಗಳಿಂದ ಕಂದಾಯ ಇಲಾಖೆಯ ಸೇವೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಅಭಾದಿತವಾಗಿ 19 ತಿಂಗಳಿಂದ ಕಾಪಾಡಿಕೊಂಡು ಬರಲಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಕುಂದಾಪುರ ತಾಲೂಕು ತಹಶೀಲ್ದಾರ್ ಆನಂದಪ್ಪ ನಾಯಕ್, ಪುರಸಭಾ ಸದಸ್ಯ ಪ್ರಭಾಕರ, ಉಡುಪಿ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿ ಸಂಘದ ಅಧ್ಯಕ್ಷ ಭರತ್ ವಿ. ಶೆಟ್ಟಿ, ಗ್ರೇಡ್ ಒನ್ ತಹಶೀಲ್ದಾರ್ ರಾಮಚಂದ್ರ ಹೆಬ್ಬಾರ್, ಪುರಸಭೆ ಅಧಿಕಾರಿ ಗಣೇಶ್, ಶರತ್, ಕುಂದಾಪುರ ತಾಲ್ಲೂಕು ಗ್ರಾಮ ಲೆಕ್ಕಾಧಿಕಾರಿ ಸಂಘದ ಅಧ್ಯಕ್ಷ ಕಾಂತರಾಜ್, ಕುಂದಾಪುರ ತಾಲ್ಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ದಿನೇಶ್, ಉಪತಹಶೀಲ್ದಾರ್ ಶಂಕರ, ಲತಾ ಮೊದಲಾದವರು ಉಪಸ್ಥಿತರಿದ್ದರು.
ಕಂದಾಯ ಅಧಿಕಾರಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.