ಪುತ್ತೂರು, ಜೂ. 30(DaijiworldNews/SM): ಗಾಳಿ ಮಳೆಗೆ ಮನೆಯ ಒಂದು ಪಾರ್ಶ್ವ ಕುಸಿದು ಪರೀಕ್ಷೆಗೆ ಸಿದ್ಧತೆ ನಡೆಸಲು ಸಂಕಷ್ಟು ಅನುಭವಿಸುತ್ತಿದ್ದ ಬಾಲಕಿಯ ಕುಟುಂಬಕ್ಕೆ ದಾನಿಗಳು ನೆರವಾಗುತ್ತಿದ್ದು, ಇದೀಗ ವಿದ್ಯಾರ್ಥಿನಿ ದೀಕ್ಷಾಳ ಶಿಕ್ಷಣಕ್ಕೆ ಜಾಗತಿಕ ಬಂಟರ ಸಂಘ ಬೆಂಬಲವಾಗಿ ನಿಂತಿದೆ ಎಂದು ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದೈಜಿವರ್ಲ್ಡ್ ಗೆ ಮಾಹಿತಿ ನೀಡಿದ್ದಾರೆ.
ಎಸ್ಎಸ್ಎಲ್ಸಿ ಓದುತ್ತಿದ್ದ ವಿದ್ಯಾರ್ಥಿನಿ ದೀಕ್ಷಾ ಶೆಟ್ಟಿ ಎಂಬವರ ಮನೆ ಗಾಳಿ ಮಳೆಗೆ ಕುಸಿದಿದೆ. ಇದರಿಂದಾಗಿ ಆಕೆಗೆ ಪರೀಕ್ಷೆಗೆ ಸಿದ್ಧತೆ ನಡೆಸಲು ಅಸಾಧ್ಯವಾಗಿತ್ತು. ಮನೆಯಲ್ಲಿ ಆರ್ಥಿಕವಾಗಿಯೂ ತುಂಬಾ ಅನಾನುಕೂಲವಿತ್ತು. ಕುಸಿದ ಮನೆಯಲ್ಲಿ ಪರೀಕ್ಷೆಗೆ ಹೇಗೆ ಸಿದ್ಧತೆ ನಡೆಸಲಿ? ಎಂದು ಆಕೆ ಅಳಲು ತೋಡಿಕೊಂಡಿದ್ದಳು.
ಪರೀಕ್ಷೆಗೆ ಸಿದ್ಧತೆ ಮಾಡುವುದಕ್ಕಿಂತ ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ತನ್ನ ಅಳಲನ್ನು ವಿದ್ಯಾರ್ಥಿನಿ ದೀಕ್ಷಾ ಶೆಟ್ಟಿ ತೋಡಿಕೊಂಡಿದ್ದಳು. ವಿದ್ಯಾರ್ಥಿನಿಯ ಮನೆ ಪರಿಸ್ಥಿತಿಯ ಬಗ್ಗೆ ದೈಜಿವರ್ಲ್ಡ್ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ವಿದ್ಯಾರ್ಥಿನಿ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ದೈಜಿವರ್ಲ್ಡ್ ವಾಹಿನಿ ಮೂಲಕ ಶಾಸಕ ಸಂಜೀವ ಮಠಂದೂರು ಭರವಸೆ ನೀಡಿದ್ದರು.
ಇದೀಗ ದೀಕ್ಷಾ ಶೆಟ್ಟಿಯ ಶಿಕ್ಷಣದ ವೆಚ್ಚವನ್ನು ನೋಡಿಕೊಳ್ಳುವ ಭರವಸೆಯನ್ನು ದೈಜಿವರ್ಲ್ಡ್ ಮೂಲಕ ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನೀಡಿದ್ದಾರೆ. ಪಿಯುಸಿ, ಡಿಗ್ರಿ ಶಿಕ್ಷಣ ಸಂಪೂರ್ಣ ಉಚಿತವಾಗಿ ನೀಡುವ ಭರವಸೆ ನೀಡಿದ್ದಾರೆ. ಪದವಿ ವ್ಯಾಸಂಗದ ತನಕದ ಹಣವನ್ನು ಜಾಗತಿಕ ಬಂಟರ ಸಂಘ ಭರಿಸಲಿದೆ. ಅಲ್ಲದೆ, ದೀಕ್ಷಾ ತಂದೆ ಗೋಪಾಲ ಶೆಟ್ಟಿ ಕಾಲು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯ ಸೇವೆಯ ಖರ್ಚು ಕೂಡಾ ನೀಡುವ ಭರವಸೆ ನೀಡಿದ್ದಾರೆ.