ಮಂಗಳೂರು, ಜೂ 30 (DaijiworldNews/PY): ದ.ಕ.ಜಿಲ್ಲಾ ಕಿಸಾನ್ ಸಮಿತಿಯ ನೂತನ ಅಧ್ಯಕ್ಷ, 16 ಬ್ಲಾಕ್ ಕಿಸಾನ್ ಅಧ್ಯಕ್ಷರುಗಳ ಪದಗ್ರಹಣ ಸಮಾರಂಭ ಬುಧವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಮಾಜಿ ಸಚಿವ ರಮಾನಾಥ ರೈ, "ಭೂ ಮಸೂದೆ ಕಾಯ್ದೆಯಿಂದ ಭೂಮಿ ಕಳೆದುಕೊಂಡವರಿಗೆ ಕಾಂಗ್ರೆಸ್, ಇಂದಿರಾ ಗಾಂಧಿ, ದೇವರಾಜ ಅರಸು ಅವರ ನೆನಪು ಈಗಲೂ ಇದೆ. ಆದರೆ, ಭೂಮಿ ಪಡೆದು ಇಂದು ಸ್ವಾಭಿಮಾನದ ಜೀವನ ನಡೆಸುತ್ತಿರುವವರು ಕಾಂಗ್ರೆಸ್ ಅನ್ನು ಮರೆತಿದ್ದಾರೆ ಎಂದವರು ಜಿಲ್ಲೆಯಲ್ಲಿ ರೈತ ಸಂಘಟನೆಯನ್ನು ಬಲಿಷ್ಠಗೊಳಿಸಿ ರೈತರ ಸಮಸ್ಯೆಗೆ ಇನ್ನಷ್ಟು ಧ್ವನಿಯಾಗಿ ಕೆಲಸಮಾಡಬೇಕು" ಎಂದು ಕರೆ ನೀಡಿದರು.
ದ.ಕ.ಜಿಲ್ಲಾ ಕಿಸಾನ್ ಸಮಿತಿಯ ನೂತನ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಮಾತನಾಡಿ, "ಮುಂದಿನ ದಿನಗಳಲ್ಲಿ ಜಿಲ್ಲೆಯ ಉದ್ದಗಲಕ್ಕೂ ಸಾಮಾನ್ಯ ಜನರಿಗೆ ದೊರಕುವ ಕೃಷಿ ಉಪಕರಣವಾಗಿರಬಹುದು, ರಸಗೊಬ್ಬರವಾಗಿರಬಹುದು, ಸಹಕಾರಿ ಬ್ಯಾಂಕ್ನಿಂದ ಸಿಗುವ ಸಾಲ ಸೌಲಭ್ಯ ಮತ್ತು ಸಬ್ಸಿಡಿಯನ್ನು ಒದಗಿಸಿ ಕೊಡುವ ಮತ್ತು ಕೃಷಿಕರ ಮಕ್ಕಳಿಗೆ ಸರಕಾರದಿಂದ ದೊರೆಯುವ ಎಲ್ಲಾ ಕಾರ್ಯಕ್ರಮಗಳನ್ನು ಒದಗಿಸಿ ಕೊಡಲು ಕಿಸಾನ್ ಘಟಕ ಬದ್ಧವಾಗಿದೆ" ಎಂದು ತಿಳಿಸಿದರು.
ಈ ಸಂದರ್ಭ ಮಾಜಿ ಶಾಸಕರಾದ ವಸಂತ್ ಬಂಗೇರಾ, ಮೊಯ್ದೀನ್ ಬಾವಾ, ಉಮಾನಾಥ್ ಶೆಟ್ಟಿ, ಶಾಲೆಟ್ ಪಿಂಟೊ, ಜೋಕಿಂ ಡಿಸೋಜಾ, ಬಿ.ಎಂ.ಅಬ್ಬಾಸ್ ಅಲಿ, ಲಾರೆನ್ಸ್ ಡಿಸೋಜಾ, ಸುರ್ಶನ್ ಜೈನ್, ವೆಂಕಪ್ಪ ಗೌಡ, ಸುರೇಂದ್ರ ಕಂಬ್ಳಿ, ಪ್ರಶಾಂತ್ ಕಾಜೇವಾ, ಅಬ್ದುಲ್ ಸಲೀಂ, ಸದಾಶಿವ ಶೆಟ್ಟಿ, ಎಂ.ಎಸ್.ಮೊಹಮ್ಮದ್, ಪಿ.ಸಿ.ಜಯರಾಮ್, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಕಾಶ್ ಬಿ.ಸಾಲ್ಯಾನ್, ಡಾ.ರಾಜಾರಾಮ್, ಪದ್ಮನಾಭ ನರಿಂಗಾನ, ಪದ್ಮ ಶೇಖರ್ ಜೈನ್, ತುಂಬೆ ಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.