ಪುತ್ತೂರು, ಜೂ 30 (DaijiworldNews/PY): ಮಳೆಯ ಪರಿಣಾಮ ಮುತ್ತೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ದೀಕ್ಷಾ ಶೆಟ್ಟಿ ಅವರ ಮನೆ ಕುಸಿದ ಹಿನ್ನೆಲೆ ಪುತ್ತೂರು ಶಾಸಕ ಸಂಜೀವ ಮಠಂದೂರು, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಹಾಗೂ ಹಲವರು ಭೇಟಿ ಮಾಡಿದ್ದು, ಸಮಸ್ಯೆ ಆಲಿಸಿ ಧೈರ್ಯ ತುಂಬಿದ್ದಾರೆ.
ದೀಕ್ಷಾ ಶೆಟ್ಟಿ ಮುತ್ತೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ. ಈಕೆಯ ತಂದೆ ಗೋಪಾಲ ಶೆಟ್ಟಿ ಅವರು ಕಾಲು ನೋವಿನಿಂದ ಬಳಲುತ್ತಿದ್ದು, ದುಡಿಮೆ ಸಾಧ್ಯವಾಗುತ್ತಿಲ್ಲ. ಪತ್ನಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ.
ತಂದೆ, ತಾಯಿ, ಸಹೋದರನೊಂದಿಗೆ ವಾಸವಾಗಿದ್ದ ದೀಕ್ಷಾಳ ಮನೆ ಮಳೆಯ ಪರಿಣಾಮ ಜೂನ್ 28ರಂದು ಕುಸಿದಿತ್ತು. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡುವುದು ಎನ್ನುವುದು ದೀಕ್ಷಾಳ ಚಿಂತೆ.
"ವಿದ್ಯಾರ್ಥಿನಿ ದೀಕ್ಷಾ ಬಯಸಿದ್ದಲ್ಲಿ ಕೊಂಬೆಟ್ಟು ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಪುತ್ತೂರು ಬಿಇಒ ಲೋಕೇಶ್ ಹೇಳಿದ್ದಾರೆ. ಆದರೆ, ಸದ್ಯ ನಾನು ಕುಪ್ಪೆಪದವಿನ ಸಂಬಂಧಿಕರ ಮನೆಯಿಂದ ಶಾಲೆಗೆ ತೆರಳುತ್ತಿದ್ದು, ಅಲ್ಲೇ ಪರೀಕ್ಷೆ ಬರೆಯುತ್ತೇನೆ ಎಂದು ದೀಕ್ಷಾ ತಿಳಿಸಿದ್ದಾಳೆ" ಎಂದು ಲೋಕೇಶ್ ಹೇಳಿದ್ದಾರೆ.
ದೀಕ್ಷಾಳ ಸಹೋದರ 7ನೇ ತರಗತಿ ಪೂರ್ಣಗೊಳಿಸಿದ್ದು, 8ನೇ ತರಗತಿಗೆ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಗೆ ದಾಖಲಾಗುವಂತೆ ಬಿಇಒ ಸಿಆರ್ಪಿಗೆ ಸೂಚನೆ ನೀಡಿದ್ದಾರೆ.
ಕುಸಿದ ಮನೆಯ ಪುನರ್ನಿರ್ಮಾಣಕ್ಕೆ ಪುತ್ತೂರು ಬಂಟರ ಸಂಘ ಸೇರಿದಂತೆ ಹಲವಾರು ಸಂಸ್ಥೆಗಳು ಕುಟುಂಬಕ್ಕೆ ಭರವಸೆ ನೀಡಿವೆ. ಮತ್ತೊಂದು ಸಂಸ್ಥೆ ಕುಟುಂಬಕ್ಕೆ ದರ್ಬೆಯಲ್ಲಿ ತಾತ್ಕಾಲಿಕ ಮನೆ ಒದಗಿಸುವುದರೊಂದಿಗೆ ಮುಂದೆ ಹೊಸ ಮನೆ ನಿರ್ಮಿಸಿ ಕೊಡಲು ಯೋಜಿಸಿದೆ.
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಹಜ್ ರೈ ಅವರ ನೇತೃತ್ವದಲ್ಲಿ ಆಹಾರ ಕಿಟ್ ವಿತರಿಸಲಾಯಿತು.