ಕಾಸರಗೋಡು, ಜೂ. 29(DaijiworldNews/SM): ಕಾಸರಗೋಡಿನ ಗ್ರಾಮಗಳ ಹೆಸರುಗಳನ್ನೂ ಮಲಯಾಳೀಕರಣಗೊಳಿಸುವ ಕುರಿತ ವರದಿಗಳು ಸಾಕಷ್ಟು ಚರ್ಚೆ ಹಾಗೂ ಪ್ರತಿಭಟನೆಗೆ ಎಡೆಮಾಡಿಕೊಟ್ಟಿರುವ ಮಧ್ಯೆ ಈ ಬಗ್ಗೆ ಯಾವುದೇ ಸುತ್ತೋಲೆ, ಆದೇಶ ಹೊರಡಿಸಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.ಇದರಿಂದ ಈ ಗೊಂದಲ ತಾತ್ಕಾಲಿಕವಾಗಿ ನಿವಾರಣೆಯಾಗಿದಂತಾಗಿದೆ.
ಈ ಕುರಿತ ವರದಿಗಳು ಹೊರ ಬೀಳುತ್ತಿದ್ದಂತೆ ಕಾಸರಗೋಡಿನ ಕನ್ನಡಿಗರು ಹಾಗೂ ಕರ್ನಾಟಕದ ಪ್ರಮುಖ ನಾಯಕರು ಕೇರಳ ಸರಕಾರದ ಮೇಲೆ ಒತ್ತಡ ಹೇರಿದ್ದರು. ಈ ನಡುವೆ ಇಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ವರದಿ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಸರಕಾರ ಅಭಿಪ್ರಾಯಪಟ್ಟಿದೆ. ಗ್ರಾಮಗಳ ಕನ್ನಡ ಹೆಸರನ್ನು ಮಲಯಾಳೀಕರಣ ಮಾಡುವಂತೆ ಕೇರಳ ಸರ್ಕಾರ ಆದೇಶಿಸಿಲ್ಲ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸ್ಪಷ್ಟನೆ ನೀಡಿದ್ದಾರೆ. ಕನ್ನಡ ಗ್ರಾಮಗಳ ಹೆಸರು ಬದಲಾಯಿಸಲಾಗುತ್ತಿದೆ ಎಂಬ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಈ ಕುರಿತು ಶಾಸಕರು ಸ್ಪಷ್ಟನೆ ನೀಡಿದ್ದಾರೆ.
ಇನ್ನೊಂದೆಡೆ ಕನ್ನಡ ಹೆಸರುಗಳನ್ನು ಬದಲಾವಣೆ ಮಾಡಬಾರದು ಎಂದು ಸಿಎಂ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂತಾದವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ. ಈ ನಡುವೆ ಕೇರಳದ ಊರುಗಳು ಕನ್ನಡ ಹೆಸರುಗಳನ್ನು ಬದಲಾಯಿಸುವ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸ್ಪಷ್ಟಪಡಿಸಿದೆ. ಜಿಲ್ಲಾಧಿಕಾರಿ ಸಜಿತ್ ಬಾಬು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಇನ್ನು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ 'ಕೇರಳ ಮುಖ್ಯ ಮಂತ್ರಿ ಕಚೇರಿ, ಮುಖ್ಯಮಂತ್ರಿಗಳ ಆಪ್ತ ಸಹಾಯಕ ಮತ್ತು ಕಾಸರಗೋಡು ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಹೆಸರು ಬದಲಾವಣೆಗೆ ಸಂಬಂಧಿಸಿದ ಯಾವುದೇ ಸುತ್ತೋಲೆ ಕೇರಳ ಸರ್ಕಾರ ಹೊರಡಿಸಿಲ್ಲ. ಅಂತಹ ಯೋಚನೆಯು ಸರ್ಕಾರದ ಮುಂದಿಲ್ಲ. ಆದರೆ ಪಡಿತರ ಕಾರ್ಡ್ಗಳಲ್ಲಿ ಸಾಫ್ಟ್ವೇರ್ ಕಾರಣದಿಂದ ಕೆಲವು ಹೆಸರುಗಳಲ್ಲಿ ಬದಲಾವಣೆ ಆಗಿರುವುದು ಸತ್ಯ. ಆದರೆ ಇದು ತಾಂತ್ರಿಕ ಕಾರಣದಿಂದ ಉಂಟಾದ ಲೋಪ. ಇದನ್ನು ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ' ಎಂದು ಅಶ್ರಫ್ ಫೇಸ್ಬುಕ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
'ಕೇರಳ ವಿಧಾನ ಸಭೆಯಲ್ಲಿ ಮಂಜೇಶ್ವರದ ಶಾಸಕನೆಂಬ ನೆಲೆಯಲ್ಲಿ ಕೆಲವು ವಿಚಾರಗಳನ್ನು ನಿಮ್ಮ ಮುಂದಿಡುತ್ತೇನೆ. ಕಳೆದ ಕೆಲವು ದಿನಗಳಿಂದ ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳ ಹೆಸರುಗಳನ್ನು ಬದಲಾಯಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರು ಈ ವಿಚಾರದಲ್ಲಿ ಟ್ಟೀಟ್ ಮಾಡುವ ಮೂಲಕ ಚರ್ಚೆ ಮಹತ್ವ ಪಡೆದುಕೊಂಡಿದೆ. ಕರ್ನಾಟಕದ ಗಡಿ ಅಭಿವೃದ್ಧಿ ಪ್ರಾಧಿಕಾರವು ಈ ವಿಚಾರದಲ್ಲಿ ಮನವಿಯನ್ನು ನೀಡಿರುವುದು ಈ ಎಲ್ಲಾ ಚರ್ಚೆಗೆ ಕಾರಣವಾಯಿತು' ಎಂದು ಅವರು ಹೇಳಿದ್ದಾರೆ.
'ಅಧಿಕೃತವಾಗಿ ಯಾವುದೇ ಸುತ್ತೋಲೆ ಇಲ್ಲದೆ ಕೇವಲ ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿಗಳ ಆಧಾರದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನೀಡಿದ ಹೇಳಿಕೆ ಜನರಲ್ಲಿ ಗೊಂದಲ ಉಂಟುಮಾಡಿದೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ನೀಡಿದ ಅನಗತ್ಯ ಹೇಳಿಕೆಯು ವಿಷಾದನೀಯ. ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಪರವಾಗಿ ಕೆಲವು ಪೂರಕ ಕ್ರಮಗಳನ್ನು ಕೇರಳದಲ್ಲಿ ಎಲ್ಲಾ ಸರ್ಕಾರಗಳು ಕೈಗೊಂಡಿವೆ. ಭಾಷಾ ಅಲ್ಪಸಂಖ್ಯಾತರಿಗೆ ಸಮಸ್ಯೆ ಆಗುವ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸರ್ಕಾರ ಧನಾತ್ಮಕವಾಗಿ ಸ್ಪಂದಿಸುವ ವಾತಾವರಣ ಕೇರಳದಲ್ಲಿದೆ. ಪರಿಹಾರವಾಗಬೇಕಾದ ಸಮಸ್ಯೆಗಳು ಇನ್ನೂ ಇರುವುದು ವಾಸ್ತವ. ಇದನ್ನು ಸಂಘಟಿತ ಪ್ರಯತ್ನದಿಂದ ಪರಿಹರಿಸಲು ಸಾಧ್ಯವಾಗುವ ವಾತಾವರಣ ನಿರ್ಮಾಣವಾಗಬೇಕು. ನಾಡಿನ ಭಾಷಾ ಸಾಮರಸ್ಯವನ್ನು, ಸಾಂಸ್ಕೃತಿಕ ವೈವಿಧ್ಯತೆಯನ್ನು ಉಳಿಸಿ ಬೆಳೆಸುವಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಬಾರದು' ಎಂದು ಅವರು ಬರೆದಿದ್ದಾರೆ.
'ಮಂಜೇಶ್ವರದ ಶಾಸಕ ಹಾಗೂ ಒಬ್ಬ ಅಪ್ಪಟ ಕನ್ನಡಿಗನೆಂಬ ನೆಲೆಯಲ್ಲಿ ಕಾಸರಗೋಡಿನ ಯಾವುದೇ ಪ್ರದೇಶದ ಸ್ಥಳನಾಮವನ್ನು ಬದಲಾಯಿಸುವ ಷಡ್ಯಂತ್ರವೋ, ಸರ್ಕಾರದ ಅದೇಶವೆನಾದರೂ ಬಂದರೆ ಆದರ ವಿರುದ್ದದ ಹೋರಾಟಕ್ಕೆ ನೇತೃತ್ವ ನೀಡಲು ನಾನು ಸಿದ್ಧ. ಕನ್ನಡ ಅಲ್ಪಸಂಖ್ಯಾತರ ಸಂವಿಧಾನ ಬದ್ಧ ಹಕ್ಕುಗಳ ಸಂರಕ್ಷಣೆಯಲ್ಲಿ ಸದಾ ಜಾಗೃತನಾಗಿರುತ್ತೇನೆ' ಎಂದೂ ಅಶ್ರಫ್ ಅವರು ಭರವಸೆ ನೀಡಿದ್ದಾರೆ.
ಕಾಸರಗೋಡು ಕನ್ನಡ ಪ್ರದೇಶದ ಹೆಸರು ಬದಲಾವಣೆಗೆ ಚಿಂತಿಸಿಲ್ಲ : ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಕಾಸರಗೋಡಿನ ಗ್ರಾಮಗಳ ಹೆಸರುಗಳನ್ನೂ ಬದಲಾಯಿಸಲು ಚಿಂತನೆ ನಡೆಸಿಲ್ಲ. ವಿನಾ ಕಾರಣ ಅಪಪ್ರಚಾರ ಹಾಗೂ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ .
ಹೆಸರು ಬದಲಾವಣೆ ಸುದ್ದಿಯ ಹಿಂದೆ ಸಂಘ ಪರಿವಾರ ದ ಕೈವಾಡ ಸಂಶಯ ಉಂಟಾಗಿದೆ ಎಂದು ಕಂದಾಯ ಸಚಿವ ಕೆ . ರಾಜನ್ ತಿಳಿಸಿದ್ದಾರೆ.
ಸಾಮಾಜಿಕ ಜಾಲ ತಾಣಗಳ ಮೂಲಕ ಸಂಘ ಪರಿವಾರ ಇಲ್ಲ ಸಲ್ಲದ ಅಪಪ್ರಚಾರ ನಡೆಸಿದ್ದು, ಇದನ್ನು ಕರ್ನಾಟಕದ ಬಿಜೆಪಿ ನಾಯಕರು ಕೈಗೆತ್ತಿ ಕೊಂಡು ಜನರಲ್ಲಿಗೊಂದಲ ಸೃಷ್ಟಿಸುವ ಯತ್ನ ನಡೆದಿದೆ. ಸಂಘ ಪರಿವಾರದ ಧ್ರುವೀಕರಣದ ಹುನ್ನಾರದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಲೋಕೋಪಯೋಗಿ ಸಚಿವ ಮುಹಮ್ಮದ್ ರಿಯಾಜ್ ತಿಳಿಸಿದ್ದಾರೆ.