ಕೋಟ, ಜೂ.29 (DaijiworldNews/HR): ಕೋಡಿ ಗ್ರಾಮಪಂಚಾಯತ್ ಗೆ ಹಿಂದೂ ಧಾರ್ಮಿಕ ದತ್ತಿದರ್ಮದಾಯ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪಂಚಾಯತ್ ವ್ಯಾಪ್ತಿಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಕಡಲ ಕಿನಾರೆ ವಾಸಿಸುತ್ತಿದ್ದ 471ಕುಟುಂಬಗಳ ಹಕ್ಕುಪತ್ರ ಕುರಿತಂತೆ ಚರ್ಚಿಸಿ ಇದೇ ಬರುವ ಶನಿವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಡೀಸಿ, ಕಂದಾಯ ಇಲಾಖೆ, ಸಿ.ಆರ್.ಝಡ್ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಏರ್ಪಡಿಸಿ ಸಮಸ್ಯೆಯನ್ನು ಬಗೆಹರಿಸಿ, ಈ ಭಾಗದ 471ಹಕ್ಕು ಪತ್ರದಲ್ಲಿ 21ಹಕ್ಕುಪತ್ರ ಇತ್ಯರ್ಥಗೊಂಡಿದ್ದು ಒಂದು ಸೆಂಟ್ಸ್ 5 ಸಾವಿರ ದರವನ್ನು ಕಡಿತಗೊಳಿಸಿ ಶೇ.10ರಂತೆ ಇನ್ನುಳಿದ 450 ಹಕ್ಕುಪತ್ರಕ್ಕೆ ರಿಯಾಯಿತಿ ನೀಡಲು ಸರಕಾರದ ಇಲಾಖೆಯ ಮೂಲಕ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಆ ಮೂಲಕ ಆಗಿನ ಜಗದೀಶ್ ಶೆಟ್ಟರ್ ಆಡಳಿತಾವಧಿಯಲ್ಲಿ ಕೈಗೊಂಡ ಹಕ್ಕುಪತ್ರ ನಿಯಮವನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಕ್ರಮಕೈಗೊಳ್ಳಲಾಗುವುದು, ಹಂಗಾರಕಟ್ಟೆ ಹೊಸ ಬಾಜ್ 9 ನಿರ್ಮಾಣ ವಿಳಂಬ ಕುರಿತಂತೆ ಪ್ರಸ್ತುತವಿರುವ ಹಳೆ ಬಾಜ್ 9 ದುರಸ್ಥಿಗೊಳಿಸಲು ಕ್ರಮಕೈಗೊಳ್ಳಲು ಮೀನುಗಾರಿಕಾ ಇಲಾಖೆಯ ಮೂಲಕ ಅವಶ್ಯಕತೆ ಅನುಗುಣವಾಗಿ 2 ಲಕ್ಷ ರೂ ಬಿಡುಗಡೆಗೊಳಿಸಲು ಸೂಚಿಸಿದರು.
ಕೋಡಿ, ಸಾಸ್ತಾನ, ಕೋಟ ಮೂಲಕ ಕೆ.ಎಸ್.ಆರ್,ಟಿ.ಸಿ ಬಸ್ ಸಂಚಾರ ಕುರಿತಂತೆ ಪಂಚಾಯತ್ ಅಧ್ಯಕ್ಷರ ಮನವಿಯ ಮೇರೆಗೆ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು, ಕೋಡಿ ಕನ್ಯಾಣ ಉಪ ಆರೋಗ್ಯ ಕೇಂದ್ರದಲ್ಲಿ ವಾರದಲ್ಲಿ ಮೂರುದಿನ ಸಿಬ್ಬಂದಿ ನೇಮಕ ಕುರಿತಂತೆ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಲಾಗುವುದು.
ಇನ್ನು ಗ್ರಾಮದ ಅಭಿವೃದ್ಧಿ ,ಸಮಸ್ಯೆ ಕುರಿತಂತೆ ಪಂಚಾಯತ್ ಗೆ ಭೇಟಿ ನೀಡಿದ ಸಚಿವರೆದುರಲ್ಲೆ ವಿವಿಧ ಸಮಸ್ಯೆಗಳನ್ನಿಟ್ಟುಕೊಂಡು ಅಲ್ಲಿನ ಸ್ಥಳೀಯರು ಗೌಜು ಗದ್ದಲ ಸೃಷ್ಠಿಸಿದರು. ಇಂಥ ಕೊರೊನಾ ಸಂದರ್ಭದಲ್ಲಿ ಪಂಚಾಯತ್ ಟ್ಯಾಕ್ಸ್ ವಸೂಲಾತಿ ಎಷ್ಟು ಸಮಂಜಸ, ಟ್ಯಾಕ್ಸ್ ನೀಡದಿದ್ದರೆ ಲೈಸೆನ್ಸ್ ನೀಡುವುದಿಲ್ಲ,ಅಲ್ಕದೆ ಮಾಹಿತಿ ಹಕ್ಕು ಆಧಾರದ ಮೇಲೆ ಪಂಚಾಯತ್ ಕಾಮಗಾರಿ ವಿವರ ಕೇಳಿದರೆ ನಮ್ಮನ್ನು ಗದರಿಸುತ್ತಾರೆ ಎಂಬ ಆರೋಪಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ ಪಂಚಾಯತ್ ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದ ಆಧಾಯಗಳಿಲ್ಲ ಇದ್ದ ಆಧಾಯದಲ್ಲಿ ವಸೂಲಾತಿ ಮಾಡಬೇಕಾದದ್ದು ನಮ್ಮ ಕರ್ತವ್ಯ ಅಲ್ಲದೆ ನಮ್ಮ ಪಂಚಾಯತ್ ಸಿಬ್ಬಂದಿಗೆ ಮೂರು ತಿಂಗಳಿಂದ ಸಂಬಳ ನೀಡಲು ಹಣವಿಲ್ಲ ಹಾಗಿರುವಾಗ ಟ್ಯಾಕ್ಸ್ ವಸೂಲಾತಿ ಅಗತ್ಯವಲ್ಲವೇ ಎಂದು ಉತ್ತರಿಸಿ ಇವರು ರಾಜಕೀಯ ಉದ್ದೇಶಕ್ಕೆ ನಮ್ಮಂತ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಇದು ಎಷ್ಟು ಸರಿ ಎಂದು ಸಚಿವರೆದುರಲ್ಲೆ ಪ್ರಶ್ನಿಸಿದರು.
ಈ ಮಧ್ಯ ಸಚಿವರು ಸ್ಥಳೀಯರನ್ನು ಹಾಗೂ ಅಭಿವೃದ್ಧಿ ಅಧಿಕಾರಿಯನ್ನು ಸಮಾಧಾನ ಪಡಿಸಿ ಒಂದು ಪಂಚಾಯತ್ ವ್ಯವಸ್ಥೆಯಲ್ಲಿ ಗೌಜು ಗದ್ದಲಕ್ಕೆ ಎಡೆಮಾಡಿಕೊಡದೆ ಶಿಸ್ತಿನಿಂದ ನಡೆಸಲು ಯೋಗ್ಯ ಸಹಕಾರ ಮನವಿಮಾಡಿದರು.
ಪಂಚಾಯತ್ ಅಧ್ಯಕ್ಷ ಪ್ರಭಾಕರ ಕುಂದರ್ ಹಾಗೂ ಆರ್.ಟಿ.ಐ ಕಾರ್ಯಕರ್ತ ಉದಯ್ ನಡುವೆ ವಾಕ್ ಸಮರ ಏರ್ಪಟಿತು. ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಯೊಂದರಲ್ಲಿ ಅವ್ಯವಹಾರ ಕುರಿತಂತೆ ಪಂಚಾಯತ್ ಅಧ್ಯಕ್ಷರು ಮೌನ ವಹಿಸುತ್ತಾರೆ ಈ ರೀತಿ ನಮ್ಮ ಬಗ್ಗೆ ನಿರ್ಲಕ್ಷ್ಯ ಮನೋಭಾವನೆ ಸಲ್ಲ ಎಂಬ ಆರೋಪಕ್ಕೆ ಉತ್ತರಿಸಿ ನಡೆದಿದ್ದ ಎನ್ನಲಾದ ಕಾಮಗಾರಿ ತಾಲೂಕು ಪಂಚಾಯತ್ ನದ್ದು ನಮ್ಮ ಬಳಿ ಕೇಳುವುದು ಎಷ್ಟು ಸೂಕ್ತ ನಮ್ಮಗೆ ಸರಿಯಾಗಿ ಆಡಳಿತ ನಡೆಸಲು ಬಿಡಿ ನಿಮ್ಮ ರಾಜಕೀಯ ಇದ್ದರೆ ನಿಮ್ಮಲ್ಲೆ ಇಟ್ಟುಕೊಳ್ಳಿ ಎಂದು ಹೇಳುದರು.
ಒಟ್ಟಿನಲ್ಲಿ ಇಡೀ ಸಭೆ ಗದ್ದಲದಲ್ಲಿ ಮುಳುಗಿಸಲು ಪ್ರಯತ್ನಿಸಿದ್ದಾದರೂ ಸಚಿವರು ಎಲ್ಲವನ್ನು ಸಮಾಧಾನಪಡಿಸಿ ಸಭೆಯನ್ನು ಯಶಸ್ವಿ ಗೊಳಿಸಿ ಕೊಂಡು ಹಿಂತ್ತಿರುಗಿದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರಮೂರ್ತಿ, ಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್,ಅಭಿವೃದ್ಧಿ ಅಧಿಕಾರಿ ಡೆನ್ನಿ ಕ್ವಾಡ್ರಸ್, ಬ್ರಹ್ಮಾವರ ತಾ.ಪಂ ಇ.ಓ ಎಚ್ ಆರ್ ಇಬ್ರಾಹಿಂಪುರ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಚ್ಚಿದಾನಂದ ರಾವ್, ಪಂಚಾಯತ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.