ಕುಂದಾಪುರ, ಜೂ.29 (DaijiworldNews/HR): ಬೊಬ್ಬರ್ಯನ ಕಟ್ಟೆಯ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆಗೆ ಈಡೇರುವ ಹಂತ ತಲುಪಿದ್ದು, ಮಂಗಳವಾರ ರಾಷ್ಟ್ರೀಯ ಹೆದ್ದಾರಿಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಹೆದ್ದಾರಿ ಪ್ರವೇಶ, ನಿರ್ಗಮನಕ್ಕೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆಯವರ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಸ್ಥಳಕ್ಕೆ ಆಗಮಿಸಿದ್ದರು.
ಕೋಟ ಕಡೆಯಿಂದ ಬರುವ ವಾಹನಗಳಿಗೆ ಕುಂದಾಪುರ ಎಲ್ಐಸಿ ರಸ್ತೆ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಪ್ರವೇಶ ನೀಡಲು ಅವಕಾಶ ಮಾಡಿಕೊಡುವುದು, ಕುಂದಾಪುರ ಶಾಸ್ತ್ರಿ ಸರ್ಕಲ್ ಸರ್ವೀಸ್ ರಸ್ತೆಯಿಂದ ಉಡುಪಿಗೆ ಸಾಗುವ ದಾರಿಯಲ್ಲಿ, ಸರ್ವೀಸ್ ರೋಡಿನಿಂದ ರಾಷ್ಟ್ರೀಯ ಹೆದ್ದಾರಿಗೆ ಇದೇ ಸ್ಥಳದಲ್ಲಿ ಅವಕಾಶ ನೀಡುವುದು, ಬೈಂದೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ವಾಹನಗಳ ರೈಲ್ವೆ ನಿಲ್ದಾಣ, ಬಸ್ರೂರು ಭಾಗಕ್ಕೆ ಹೋಗಲು ಇಲ್ಲಿ ಸವೀಸ್ ರಸ್ತೆಗೆ ಪ್ರವೇಶ ನೀಡಲು ಒಪ್ಪಿಗೆ ನೀಡಲಾಗಿದೆ.
ಬಸ್ರೂರು ಮೂರ್ಕೈ ಹತ್ತಿರದ ಅಂಡರ್ಪಾಸ್ ಅನ್ನು ಕೂಡಲೆ 2 ಕಡೆ ಹಂಪ್ ಅಳವಡಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ , ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸದಾನಂದ ಬಳ್ಕೂರು, ಯುವಮೋರ್ಚಾ ಕುಂದಾಪುರ ಅಧ್ಯಕ್ಷ ಅವಿನಾಶ್ ಉಳ್ತೂರು, ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಕುಂದಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಜಯ್ ಎಸ್ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಪುರಸಭೆ ಸದಸ್ಯರಾದ ಗಿರೀಶ್ ಜಿ.ಕೆ, ರೋಹಿಣಿ ಉದಯ್ ಕುಮಾರ್, ಸಿಪಿಐಎಂ ಮುಖಂಡರಾದ ಎಚ್.ನರಸಿಂಹ, ಸುರೇಶ ಕಲ್ಲಾಗರ, ರೈಲ್ವೆ ಹಿತರಕ್ಷಣಾ ಸಮಿತಿಯ ಗಣೇಶ ಪುತ್ರನ್, ವಿವೇಕ್ ನಾಯಕ್, ರಾಜೇಶ ಕಾವೇರಿ, ಬಿಜೆಪಿಯ ಪ್ರಮುಖರಾದ ಕುಂದಾಪುರ ಅಧ್ಯಕ್ಷ ಸುನಿಲ್ ಶೆಟ್ಟಿ ಹೇರಿಕುದ್ರು, ಸುಧೀರ್ ಕೆ ಎಸ್ ಮೊದಲಾದವರು ಉಪಸ್ಥಿತರಿದ್ದರು.