ಕಾಸರಗೋಡು, ಜೂ 29 (DaijiworldNews/MS): ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣದ ಆರೋಪಿಗಳ ಪತ್ನಿಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಉದ್ಯೋಗ ನೀಡಿರುವ ಜಿಲ್ಲಾ ಪಂಚಾಯತ್ ತೀರ್ಮಾನ ಹಾಗೂ ಈ ಕುರಿತು ಯು ಡಿ ಎಫ್ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಂಡಿಸಿದ ನಿರ್ಣಯದ ಕ್ರಮ ಖಂಡಿಸಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಜೂ.29 ರ ಇಂದು ಜಿಲ್ಲಾ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಕಚೇರಿ ಯೊಳಗೆ ನುಗ್ಗಲೆತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಬಲವಂತವಾಗಿ ತಡೆದರು. ಬಳಿಕ ಕಚೇರಿ ದ್ವಾರದ ಬಳಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು . ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ .ಪಿ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನೇಮಕಾತಿಯನ್ನು ಕೂಡಲೇ ರದ್ದುಪಡಿಸಬೇಕು . ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಮುನ್ನೆಚ್ಚರಿಕೆ ನೀಡಿದರು. ಕಾರ್ತಿಕೇಯನ್ ಪೆರಿಯ , ಇಸ್ಮಾಯಿಲ್ ಚಿತ್ತಾರಿ , ಮ್ಯಾಥ್ಯೂ ಬದಿಯಡ್ಕ, ರತೀಶ್ ಇರಿಯ , ಸಂತೋಷ್ ಕ್ರಾಸ್ತ, ಸುಭಾಷ್ ಪೆರಿಯ , ಮಹೇಶ್ ಕೆ .ಕೆ ಮೊದಲಾದವರು ನೇತೃತ್ವ ನೀಡಿದರು