ಉಡುಪಿ, ಜೂ 29 (DaijiworldNews/MS): ಉಡುಪಿಯಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿ ಸುಮಾರು ಒಂದು ವಾರ ಕಳೆದಿದೆ. ಎಲ್ಲಾ ವ್ಯವಹಾರ ಚಟುವಟಿಕೆಗಳ ಜೊತೆಗೆ ಬಸ್ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗಿದೆ. ಆದರೆ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಉಡುಪಿ ಜಿಲ್ಲೆಯಲ್ಲಿ ಈವರೆಗೆ ಖಾಸಗಿ ಬಸ್ ಗಳು ಸಂಚಾರ ಆರಂಭಿಸಿಲ್ಲ.
ಸದ್ಯ ಜಿಲ್ಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಮತ್ತು ನರ್ಮ್ ಬಸ್ ಗಳು ಸಂಚಾರ ನಡೆಸುತಿದ್ದು, ರಾಜ್ಯ ಸರಕಾರದ ಕೋವಿಡ್ ಮಾರ್ಗಸೂಚಿಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಸಂಚಾರ ನಡೆಸುತ್ತಿರುವ ಹಲವು ಘಟನೆಗಳು ಬೆಳಕಿಗೆ ಬಂದಿವೆ.
ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಬಸ್ ಗಳಲ್ಲಿ ಕೇವಲ 50% ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದ್ದು ಬಸ್ ನಲ್ಲಿ ನಿಂತುಕೊಂಡು ಪ್ರಯಾಣಿಸಲು ಅವಕಾಶ ಇಲ್ಲ. ಆದರೆ ಉಡುಪಿ ಯಿಂದ ಹೆಬ್ರಿ, ಕುಂದಾಪುರ, ಮತ್ತು ಕುಂದಾಪುರದಿಂದ ಭಟ್ಕಳ ಭಾಗಕ್ಕೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ನಿಯಮ ಮೀರಿ ಜನರನ್ನು ತುಂಬಿಸಿ ಸಂಚಾರ ನಡೆಸುತ್ತಿರುವುದು ಕಂಡು ಬಂದಿದೆ.
ಕಳೆದ ಬಾರಿ ಖಾಸಗಿ ಬಸ್ ಗಳಲ್ಲಿ ನಿಯಮ ಮೀರಿ ಜನರನ್ನು ಕರೆದುಕೊಂಡು ಹೋದ ಕಾರಣಕ್ಕೆ ಜನರನ್ನು ಬಸ್ ನಿಂದ ಇಳಿಸಿ ಬಸ್ ಮಾಲಕ, ಮತ್ತು ಸಿಬ್ಬಂದಿಗಳಿಗೆ ದಂಡ ವಿಧಿಸಲಾಗಿತ್ತು. ಈ ಬಾರಿ ಸ್ವತಹ ಜಿಲ್ಲಾಧಿಕಾರಿಗಳೇ ಸ್ವಷ್ಟ ಸೂಚನೆ ನೀಡಿದ್ದು 50% ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದುಕೊಂಡು ಹೋದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳಿಗೆ ಮತ್ತು ಸರಕಾರಿ ಬಸ್ ಗಳಿಗೆ ಬೇರೆ ಬೇರೆ ನಿಯಮಗಳು ಅನ್ವಯ ಆಗುತ್ತದೆಯೇ ಎಂಬ ಪ್ರಶ್ನೆ ಇದೀಗ ಜನರಲ್ಲಿ ಮೂಡಿದೆ.
ಕೆ.ಎಸ್.ಆರ್.ಟಿ.ಸಿ ಬಸ್ ಗಳು ಫುಟ್ ಬೋರ್ಡ್ ನಲ್ಲಿ ಕೂಡಾ ಜನರಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿವೆ. ಕೆಲವೊಂದು ಮಾರ್ಗದ ಬಸ್ ಗಳಲ್ಲಿ ಕಂಡಕ್ಟರ್ ಕೂಡಾ ಫುಟ್ ಬೋರ್ಡ್ ನಲ್ಲಿ ನೇತಾಡಿಕೊಂಡು ಪ್ರಯಾಣಿಸುವ ದೃಶ್ಯಗಳು ಕಂಡು ಬಂದಿವೆ.ಖಾಸಗಿ ಬಸ್ ಗಳಿಗೆ ನಿಯಮ ಮೀರಿದರೆ ದಂಡ ವಿಧಿಸುವ ಅಧಿಕಾರಿಗಳು ಸರಕಾರಿ ಬಸ್ ಗಳಿಗೆ ಏಕೆ ದಂಡ ವಿಧಿಸುವುದಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ
ಇನ್ನು ಈ ಘಟನೆ ಕುರಿತು ದಾಯ್ಜಿವಲ್ಡ್ ಗೆ ಪ್ರತಿಕ್ರಿಯಿಸಿದ ಉಡುಪಿ ಆರ್.ಟಿ.ಒ ಜೆ.ಪಿ ಗಂಗಾಧರ್ ಅವರು "ಈಗಾಗಲೇ ಈ ಕುರಿತು ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ಜೊತೆ ಮಾತನಾಡಿದ್ದೇನೆ. ಸರಕಾರಿ ಇರಲಿ ಅಥವಾ ಖಾಸಗಿ ಇರಲಿ ಕೊವಿಡ್ ನಿಯಮಗಳನ್ನು ಮೀರಿ ಜನರನ್ನು ಹತ್ತಿಸುವಂತಿಲ್ಲ. ಇನ್ನು ಮುಂದೆ ಇಂತಹ ಘಟನೆ ಗಳು ಮರುಕಳಿಸಿದರೆ ಕೊವಿಡ್ ನಿಯಮಾವಳಿಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಜೂ ೨೮ ರ ಈ ಕುರಿತು ಸೂಚನೆ ನೀಡಿದ್ದೇವೆ, ಕೊವಿಡ್ ನಿಯಮಾವಳಿ ಸಡಿಲಿಕೆಗೆ ಆದ ನಂತರವೇ ಸಂಪೂರ್ಣ ಪ್ರಮಾಣದಲ್ಲಿ ಜನರನ್ನು ಕರೆದುಕೊಂಡು ಹೋಗಲು ಅವಕಾಶವಿರುವುದು. ನಿನ್ನೆ ಒಂದು ಖಾಸಗಿ ಬಸ್ ಟ್ಯಾಕ್ಸ್ ಕಟ್ಟದೇ ಫ್ಯಾಕ್ಟರಿ ನೌಕರರನ್ನು ಕರೆದುಕೊಂಡು ಹೋಗುವ ಬಗ್ಗೆ ಬಂದ ಖಚಿತ ಮಾಹಿತಿಯ ಆಧಾರದಲ್ಲಿ ತಪಾಸಣೆ ನಡೆಸಿ ಸೀಜ್ ಮಾಡಿದ್ದೇವೆ. ಕೆ.ಎಸ್.ಆರ್.ಟಿ.ಸಿ. ಬಸ್ ಗಳು ನಿಯಮ ಮೀರಿದರೂ ಕಠಿಣ ಕ್ರಮ ಜರಗಿಸಲಾಗುವುದು" ಎಂದವರು ಪ್ರತಿಕ್ರಿಯಿಸಿದ್ದಾರೆ.