ಮಂಗಳೂರು, ಜೂ 29 (DaijiworldNews/MS):ಅಭಿವ್ಯಕ್ತಿ ಸ್ವಾತಂತ್ರ್ಯದ ಧಮನದ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರುವ ಮೂಲಕ ಕೊಡಲು ಏಟು ಹಾಕುವುದಕ್ಕೆ ಪ್ರಯತ್ನಿಸಿದ್ದರು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಡೊಂಗರಕೇರಿ ಭುವನೇಂದ್ರ ಸಭಾ ಭವನದಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ವತಿಯಿಂದ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿ ಜೈಲುವಾಸ ಅನುಭವಿಸಿದ್ದ ಹಿರಿಯರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಅವರು, ರಾಜಕೀಯ ನೆಲೆ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಮಾಡಿದ್ದರು. ಸರಕಾರದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಎಲ್ಲರನ್ನೂ ಜೈಲಿಗೆ ಹಾಕುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಧಮನಿಸಿದ್ದರು. ಸಂವಿಧಾನದ ಭಾಗವಾಗಿರುವ ಪತ್ರಿಕಾ ರಂಗವನ್ನೂ ಕೂಡ ಧಮನಿಸಿ ಸರ್ವಾಧಿಕಾರ ಮನೋಭಾವವನ್ನು ಪ್ರದರ್ಶಿಸಿದ್ದರು. ಆ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿದ ಹಿರಿಯರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಬಳಿಕ ಮಾತನಾಡಿದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಮನೋಭಾವವನ್ನು ವಿರೋಧಿಸಿ ಜನ ಸಂಘದ ಪ್ರಮುಖರಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಮುಂತಾದ ನಾಯಕರ ಹೋರಾಟ ಅವಿಸ್ಮರಣೀಯ. ಅಂದಿನ ಹೋರಾಟದ ಫಲವಾಗಿ ಭಾರತದಲ್ಲಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಗಳೂರು ನಗರ ದಕ್ಷಿಣದ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ ವಹಿಸಿದ್ದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರೂಪಾ ಡಿ ಬಂಗೇರ, ಸುರೇಂದ್ರ ಜಪ್ಪಿನಮೊಗರು, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಜಯಶ್ರೀ ಕುಡ್ವ, ಪೂರ್ಣಿಮಾ ಎಂ, ಜಗದೀಶ್ ಶೆಟ್ಟಿ ಬೋಳೂರು,ಜಯಲಕ್ಷ್ಮಿ ಶೆಟ್ಟಿ, ಲೀಲಾವತಿ ಪ್ರಕಾಶ್, ಚಂದ್ರಾವತಿ ವಿಶ್ವನಾಥ್, ಸಂಧ್ಯಾ ಮೋಹನ್ ಆಚಾರ್, ರೇವತಿ ಶ್ಯಾಮ್ ಸುಂದರ್, ಬಿಜೆಪಿ ಮುಖಂಡರಾದ ಅಜಯ್ ಕುಲಶೇಖರ,ಅರುಣ್ ಜಿ ಶೇಟ್, ನಾರಾಯಣ ಗಟ್ಟಿ, ಪ್ರಶಾಂತ್ ಆಳ್ವ, ಅರ್ಶಾದ್ ಪೋಪಿ, ವಸಂತ್ ಜೆ ಪೂಜಾರಿ, ಕಿರಣ್ ಮರೋಳಿ, ನಿಲೇಶ್ ಕಾಮತ್, ಸಂಜಯ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.