ಮಂಗಳೂರು, ಜೂ 28 (DaijiworldNews/PY): "ಮುಂದಿನ ಬಾರಿ ಅಧಿಕಾರ ಕಾಂಗ್ರೆಸ್ಗೆಂದು ಬಿಜೆಪಿ ನಾಯಕರಿಗೆ ಸ್ಪಷ್ಟವಾಗಿದೆ. ಏಕೆಂದರೆ, ಪ್ರಸ್ತುತ ಆಡಳಿತದ ಬಗ್ಗೆ ಅವರೇ ಅಸಮಾಧಾನ ಹೊಂದಿದ್ದಾರೆ" ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಸೋಮವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಪ್ರಸ್ತುತ ಸರ್ಕಾರಕ್ಕೆ ಸಂಬಂಧಿಸಿದಂತೆ ಜನರ ಮನಸ್ಥಿಯ ಬಗ್ಗೆ ಬಿಜೆಪಿ ನಾಯಕರಿಗೆ ತಿಳಿದಿದೆ. ಬಿಜೆಪಿ ಆಡಳಿತವನ್ನು ನೋಡಿ ಜನರು ಬೇಸತ್ತಿದ್ದಾರೆ. ಒಟ್ಟಾರೆ ನೋಡುವುದಾದರೆ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎನ್ನುವುದನ್ನು ಸೂಚಿಸುತ್ತದೆ. ನಾವೆಲ್ಲಾ ಒಗ್ಗಟ್ಟಾಗಿರುವುದರಿಂದ ಬಿಜೆಪಿಗೆ ಕಾಂಗ್ರೆಸ್ ನಾಯಕರ ನಡುವೆ ವ್ಯತ್ಯಾಸ ಸೃಷ್ಟಿಸಲು ಅಸಾಧ್ಯ" ಎಂದರು.
"ಪಡಿತರ ಚೀಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಜುಲೈ 7ರಂದು ತೊಕ್ಕೊಟ್ಟಿನಲ್ಲಿ ಆಹಾರ ಅದಾಲತ್ ನಡೆಸಲಾಗುವುದು. ಮಂಗಳೂರು ಕ್ಷೇತ್ರಕ್ಕೆ ಸಂಬಂಧಪಟ್ಟ ಪಂಚಾಯತ್ಗಳಿಂದ ಜನರು ಅರ್ಜಿ ತೆಗೆದುಕೊಳ್ಳಬೇಕು. ಬಳಿಕ ಅದನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ" ಎಂದು ತಿಳಿಸಿದರು.
"ಲಾಕ್ಡೌನ್ನಿಂದ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳ ಮೇಲೆ ತೀವ್ರವಾದ ಪರಿಣಾಮ ಬೀರಿದೆ. ಈ ವಿಚಾರವನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಬ್ಯಾಂಕ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳ ನಿರ್ವಹಣೆ ಹಾಗೂ ಅವರ ಸಮಸ್ಯೆಯನ್ನು ಪರಿಹರಿಸಲು ಸಭೆ ಕರೆಯಬೇಕು" ಎಂದು ಹೇಳಿದರು.