ಉಡುಪಿ, ಜೂ 28 (DaijiworldNews/MS): ಉಡುಪಿ ತಾಲೂಕು ಕೊಡವೂರು ಗ್ರಾಮದ ಕಲ್ಮತ್ ಮಸೀದಿಯ ಸ್ಥಿರಾಸ್ತಿಯ ಪಹಣಿ ಪತ್ರದಲ್ಲಿ ಮಸೀದಿಯ ಹೆಸರು ಕಾನೂನು ಬದ್ಧವಾಗಿ ನೊಂದವಣಿಗೊಂಡಿದ್ದು ಅದನ್ನು ಕಾನೂನು ಬಾಹಿರವಾಗಿ ಕಂದಾಯ ಸಚಿವರಾದ ಆರ್ ಅಶೋಕ್ ರವರು ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಆರೋಪಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಅಧ್ಯಕ್ಷ ರಾದ ಹುಸೇನ್ ಕೋಡಿ ಬೆಂಗ್ರೆ ಮಾತನಾಡಿ " ಉಡುಪಿ ತಾಲೂಕು ಕೊಡವೂರು ಗ್ರಾಮದ ಸರ್ವೆ ನಂಬರ್ 53 A ರಲ್ಲಿ 67 ಸೆಂಟ್ಸ್ ವಿಸ್ತೀರ್ಣ ಜಾಮೀನಿನಲ್ಲಿ ಸುಮಾರು ನೂರೈವತ್ತು ವರ್ಷ ಹಿಂದಿನಿಂದಲೂ ಕಲಮತ್ ಜಾಮೀಯಾ ಜುಮ್ಮಾ ಮಸೀದಿ ಅಸ್ತಿತ್ವದಲ್ಲಿದ್ದು ಇದಕ್ಕೆ ಸ್ವತಂತ್ರಪೂರ್ವ ಕಾಲದಿಂದಲೂ ಅದರ ಕಾರ್ಯ ನಿರ್ವಹಣೆಗಾಗಿ ಸರಕಾರದಿಂದ ನಿರಂತರ ತಸ್ದಿಕ್ ಬರುತ್ತಿದೆ. ಸದ್ರಿ ಜುಮ್ಮಾ ಮಸೀದಿಯು ಮತ್ತು ಅದರ ಆಸ್ತಿಯು ವಕ್ಫ್ ಬೋರ್ಡಿನಲ್ಲಿ 1993 ರಲ್ಲಿ ನೋಂದವಣೆಯಾಗಿದ್ದು,2020 ರಲ್ಲಿ ಎಲ್ಲ ಕಾನೂನು ಪ್ರಕ್ರಿಯೆಗಳು ನಡೆದು ಅದಕ್ಕೆ ಬೇಕಾದಂತಹ ದಾಖಲೆಗಳ ಧೃಡೀಕರಣದ ನಂತರ ಗಝೆಟ್ ನೋಟಿಫಿಕೇಷನ್ ಆಗಿರುತ್ತದೆ.
ಕಾನೂನು ಬದ್ಧವಾಗಿ ವಕ್ಪ್ ನಲ್ಲಿ ನೋಂದಣಿ ಹಾಗೂ ಗಝೆಟ್ ನೋಟಿಫಿಕೇಷನ್ ಆದ ಕಲಮತ್ ಜಮ್ಮಾ ಮಸೀದಿಯ ಸ್ಥಿರಾಸ್ತಿಯ ಪಹಣಿ ಪತ್ರದಲ್ಲಿ ಕಾನೂನು ಬಾಹಿರವಾಗಿ ಕಲಮತ್ ಮಸೀದಿಯ ಹೆಸರನ್ನು ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಕಂದಾಯ ಸಚಿವ ಆರ್ ಅಶೋಕ್ ಅವರ ಆದೇಶದೊಂದಿಗೆ ಸರಕಾರದ ಹೆಸರನ್ನು ನಮೊದಿಸಲಾಗಿದೆ.ಆದ್ದರಿಂದ ಈ ಕಾನೂನು ಬಾಹಿರವಾಗಿ ತೆರವುಗೊಳಿಸಲು ಆದೇಶಿಸಿದ ಆದೇಶವನ್ನು ಹಿಂಪಡೆಯಬೇಕು ಹಾಗೂ ಈ ಮುಂಚಿನಂತೆ ಪಹಣಿ ಪತ್ರದಲ್ಲಿ ಮಸೀದಿಯ ಹೆಸರನ್ನು ಮರು ನೊಂದಾಯಿಸಿ ಸರಕಾರ ನ್ಯಾಯಯುತವಾಗಿ ವರ್ತಿಸಬೇಕು" ಎಂದರು.
ಸದ್ರಿ ಸ್ಥಿರಾಸ್ತಿಗೆ ಸಂಬಂಧಿತರಲ್ಲದ, ಸ್ವ ಹಿತಾಸಕ್ತಿ ಹೊಂದಿರುವವರ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿ ಗಳು ಇಲ್ಲ ಸಲ್ಲದ ಊಹಾಪೋಹಗಳನ್ನೊಳಗೊಂಡ ಮನವಿಯನ್ನು ಸ್ವೀಕರಿಸಿ ಅದರಂತೆ ಆಧಾರ ರಹಿತ ಟಿಪ್ಪಣಿಯೊಂದಿಗೆ ಸಹಾಯಕ ಕಮಿಷನರ್ ಹಾಗೂ ಪೊಲೀಸ್ ಇಲಾಖೆಯ ಅಸ್ಪಷ್ಟ ಹಾಗೂ ಪೂರ್ವಗ್ರಹ ಪೀಡಿತ ವರದಿಯ ಆಧಾರದಲ್ಲಿ ಸದ್ರಿ ಜಮೀನಿನ ಅಧಿಸೂಚನೆಯನ್ನು ರದ್ದು ಮಾಡಲು ಕೋರಿ ಅಪರ ಮುಖ್ಯ ಕಾರ್ಯದರ್ಶಿ, ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ಹಜ್ಜ್ ಇಲಾಖೆ ಕರ್ನಾಟಕ ಸರಕಾರದವರಿಗೆ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಪತ್ರದ ಆಧಾರದ ಮೇಲೆ ಯಾವುದೇ ರೀತಿಯ ನಿಯಮಗಳನ್ನು ಪಾಲಿಸದೆ ಏಕಾಏಕಿಯಾಗಿ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಆದೇಶ ಹೊರಡಿಸಿ ಸದ್ರಿ ಮಸೀದಿಯ ಸ್ಥಿರಾಸ್ತಿಯ ಪಹಣಿ ಪತ್ರವನ್ನು ಯಾವುದೇ ಕಾನೂನು ಪ್ರಕ್ರಿಯೆ ಪೂರೈಸದೆ ಮಸೀದಿಯ ಹೆಸರನ್ನು ತೆಗೆದು 'ಸರಕಾರ' ವೆಂದು ನಮೊದಿಸಿದ್ದಾರೆ. ಆರ್. ಅಶೋಕ್ ಅವರು ನೀಡಿರುವ ಆದೇಶ ಪ್ರತಿಯಲ್ಲಿ ಸಹಿ ಮತ್ತು ಸೀಲ್ ಕೂಡಾ ಇಲ್ಲ. ಇದು ಯಾವ ರೀತಿಯ ಆದೇಶ ಪ್ರತಿ " ಎಂದು ಅವರು ಪ್ರಶ್ನಿಸಿದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಬಳಿ ಜಸ್ಟಿಸ್ ಫಾರ್ ಕಲ್ಮತ್ ಮಸ್ಜಿದ್ ವೇದಿಕೆ ವತಿಯಿಂದ ಪ್ರತಿಭಟನೆಗೆ ಕೂಡಾ ಪ್ರಯತ್ನ ನಡೆಯಿತು. ಆದರೆ ಕೊವಿಡ್ ಮಾರ್ಗಸೂಚಿಯಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲದ್ದನ್ನು ಪೋಲಿಸರು ಮನಗಾಣಿಸಿದ ಬಳಿಕ ಪ್ರತಿಭಟನಾಕಾರರು ಉಡುಪಿ ತಹಶಿಲ್ದಾರರಿಗೆ ಮನಬಿ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಇಬ್ರಾಹೀಮ್ ಸಾಹೇಬ್ ಕೋಟಾ, ಪ್ರಧಾನಕಾರ್ಯದರ್ಶಿ ಮಹಮ್ಮದ್ ಮೌಲಾ, ಸುನ್ನಿ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕಲ್ಕಟ್ಟಾ, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ. ಮಹಮ್ಮದ್ ರಫೀಕ್ ಗಂಗೊಳ್ಳಿ, ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ನಜೀರ್ ಅಹ್ಮದ್, ಇದ್ರಿಸ್ ಹೂಡೆ, ಮೌಲಾನಾ ಅಬ್ದುಲ್ ಲತೀಫ್ ಮದನಿ ಉಪಸ್ಥಿತರಿದ್ದರು.