ಮಂಗಳೂರು, ಜೂ 28 (DaijiworldNews/MS): ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳ ಹಲವಾರು ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲಯಾಳೀಕರಣ ಮಾಡಲು ಹೊರಟಿರುವ ಕೇರಳ ಸರಕಾರದ ನಿರ್ಧಾರದಿಂದ ಆ ಭಾಗದ ಜನರ ಭಾವನೆಗಳಿಗೆ ಧಕ್ಕೆಯುಂಟಾಗಿದೆ " ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಸಂಸದರು, " ಕಾಸರಗೋಡು ಜಿಲ್ಲೆಯ ಮಂಜೇಶ್ವರ ಒಳಗೊಂಡು ಬಹುತೇಕ ಪ್ರದೇಶಗಳ ಹೆಸರನ್ನು ಮಲಯಾಳೀಕರಣಗೊಳಿಸುವ ಕೇರಳ ಸರ್ಕಾರದ ನಿರ್ಧಾರದಿಂದ ಆ ಭಾಗದ ಜನರ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ಕೇರಳದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಪಿಣರಾಯಿ ವಿಜಯನ್ ಅವರ ಈ ತೀರ್ಮಾನವನ್ನು ಮರುಪರಿಶೀಲಿಸಬೇಕು ಮತ್ತು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸುತ್ತೇನೆ" ಎಂದಿದ್ದಾರೆ.
ಕೇರಳ ಸರಕಾರವೂ ಕಾಸರಗೋಡು ಮತ್ತು ಮಂಜೇಶ್ವರದ ಮಧೂರು (ಮಧುರಮ್), ಮಲ್ಲ (ಮಲ್ಲಮ್), ಕಾರಡ್ಕ (ಕಡಗಮ್), ಬೇಡಡ್ಕ (ಬೇಡಗಮ್), ಪಿಲಿಕುಂಜೆ (ಪಿಲಿಕುನ್ನು), ಆನೆಬಾಗಿಲು (ಆನೆವಾಗಿಲ್), ಮಂಜೇಶ್ವರ (ಮಂಜೇಶ್ವರಮ್), ಹೊಸದುರ್ಗ (ಪುದಿಯಕೋಟ), ಕುಂಬಳೆ (ಕುಂಬ್ಳಾ), ಸಸಿಹಿತ್ಲು (ತೈವಳಪ್), ನೆಲ್ಲಿಕುಂಜೆ (ನೆಲ್ಲಿಕುನ್ನು) ಆಗಿ ಬದಲಾಯಿಸಲು ಹೊರಟಿದೆ.
ಕನ್ನಡದ ಹೆಸರುಗಳನ್ನು ಮಲಯಾಳೀಕರಣಗೊಳಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ದ್ವನಿ ಎತ್ತಿದ್ದು, " ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹಾಗೂ ಅಲ್ಲಿನ ಕೆಲವು ಗ್ರಾಮಗಳ ಕನ್ನಡದ ಹೆಸರುಗಳನ್ನು ಯಥಾವತ್ತಾಗಿ ಕಾಪಾಡಿಕೊಳ್ಳಬೇಕು: ಎಂದು ಒತ್ತಾಯಿಸಿದ್ದರು.