ಬೆಳ್ತಂಗಡಿ, ಜೂ 28 (DaijiworldNews/PY): ಬೆಳ್ತಂಗಡಿಯ ನೆರಿಯಾ ಗ್ರಾಮದ ಸಿಯೋನ್ ಆಶ್ರಮದ ಆಶ್ರಮವಾಸಿಗಳು ಕೊರೊನಾ ಗೆದ್ದಿದ್ದಾರೆ.
ಸಿಯೋನ್ ಆಶ್ರಮದಲ್ಲಿ ಒಟ್ಟು 270 ಮಂದಿ ಆಶ್ರಯ ವಾಸಿಗಳಿದ್ದು. ಕೊರೊನಾ ಪರೀಕ್ಷೆ ನಡೆಸಿದ್ದ ಸಂದರ್ಭ 225 ಕ್ಕೂ ಅಧಿಕ ಮಂದಿಗೆ ಕೊರೊನಾ ಕಾಣಿಸಿಕೊಂಡಿತ್ತು. ಧರ್ಮಸ್ಥಳದ ರಜತಾದ್ರಿ ಕೊರೊನಾ ಕೇರ್ ಸೆಂಟರ್ನಲ್ಲಿ 29 ದಿನ ಕೊರೊನಾ ಆರೈಕೆ ಪಡೆದು ಕೊರೊನಾ ಗೆದ್ದು 226 ಮಂದಿ ಪೈಕಿ 150 ಮಂದಿ ಆಶ್ರಮವಾಸಿಗಳು ಸಿಯೋನ್ ಆಶ್ರಮಕ್ಕೆ ಮರಳಿದ್ದಾರೆ.
ಸಿಯೋನ್ ಆಶ್ರಮದಲ್ಲಿ 200ಕ್ಕೂ ಅಧಿಕ ಆಶ್ರಮವಾಸಿಗಳಿದ್ದು, ಇದರಲ್ಲಿ ಬುದ್ದಿಮಾಂದ್ಯರು, ವೃದ್ದರು, ಅನಾಥರು, ನಿರ್ಗತಿಕರು, ಮನೋರೋಗಿಗಳಿದ್ದಾರೆ. ಧರ್ಮಸ್ಥಳದ ರಜತಾದ್ರಿ ಕೊರೊನಾ ಕೇರ್ ಸೆಂಟರ್ನಲ್ಲಿ 150 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಒಂದು ತಿಂಗಳ ಚಿಕಿತ್ಸೆಯ ಬಳಿಕ ಎಲ್ಲರೂ ಗುಣಮುರಾಗಿ ಆಶ್ರಮಕ್ಕೆ ಮರಳಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮುತುವರ್ಜಿಯಲ್ಲಿ ಆಶ್ರಯವಾಸಿಗಳ ಆರೈಕೆ ಮಾಡಲಾಗಿತ್ತು.
ದಾದಿಯರು, ವೈದ್ಯರು ತಮ್ಮ ಜೀವದ ಹಂಗನ್ನು ತೊರೆದು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದರು. ಇವರೆಲ್ಲರ ನಿಸ್ವಾರ್ಥ ಸೇವೆಯ ಫಲವಾಗಿ ಎಲ್ಲರೂ ಸುರಕ್ಷಿತವಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ.
ಕೊರೊನಾದಿಂದ ಗುಣಮುಖರಾದ ಆಶ್ರಮವಾಸಿಗಳನ್ನು ಒಂದು ತಿಂಗಳ ಬಳಿಕ ಸಿಯೋನ್ ಆಶ್ರಮಕ್ಕೆ ಕರೆತರಲಾಗಿದ್ದು, ಇವರಿಗೆ ಆಶ್ರಮದ ಸಿಬ್ಬಂದಿಗಳು ಸೇರಿದಂತೆ ನೆರಿಯಾ ಗ್ರಾಮಸ್ಥರು ಸ್ವಾಗತ ಕೋರಿದ್ದಾರೆ. ಇಡೀ ಆಶ್ರಮಕ್ಕೆ ಸುಣ್ಣ-ಬಣ್ಣ ಬಳಿದು ಸಿಂಗರಿಸಲಾಗಿತ್ತು. ಈ ಸಂದರ್ಭ ಶಾಸಕ ಹರೀಶ್ ಪೂಂಜಾ ಅವರು ಆಶ್ರಮದ ಅಭಿವೃದ್ದಿಗೆ 50 ಲಕ್ಷ ರೂ. ಘೋಷಣೆ ಮಾಡಿದ್ದಾರೆ.