ಉಡುಪಿ, ಜೂ 28 (DaijiworldNews/MS): ನಗರದ ಪ್ರಮುಖ ರಸ್ತೆಯಲ್ಲಿ ತೀರಾ ಅನಾರೋಗ್ಯದಿಂದ ಅಸಹಾಯಕಳಾಗಿ ಕಿರುಚುತ್ತಿದ್ದ ಮಹಿಳೆ ಹಾಗೂ ತಾಯಿಯ ಹೊಟ್ಟೆಪಾಡಿಗೆ ಬೇಡಿ ತಂದು ತಾಯಿಯ ಹೊಟ್ಟೆ ತುಂಬಿಸುತ್ತಿದ್ದ 9 ವರ್ಷದ ಮಗಳನ್ನು ವಿಶು ಶೆಟ್ಟಿಯವರು ರಕ್ಷಿಸಿ ತಾಯಿಯನ್ನು ಜಿಲ್ಲಾಸ್ಪತ್ರೆಗೆ ಹಾಗೂ ಮಗಳನ್ನು ಬಾಲಕಿಯರ ಬಾಲ ಮಂದಿರಕ್ಕೆ ದಾಖಲಿಸಿದ ಮಾನವೀಯ ಘಟನೆ ನಡೆದಿದೆ.
ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಉಡುಪಿಯ ಜೋಡುಕಟ್ಟೆಯ ಬಳಿ, ಈ ಹಿಂದೆ ಬಾಲಮಂದಿರದಲ್ಲಿ ಆಶ್ರಯ ಪಡೆಯುತ್ತಿದ್ದ ಬಾಲಕಿ ಬೇಡುತ್ತಿದ್ದುದನ್ನು ನೋಡಿದ ವಿಶು ಶೆಟ್ಟಿಯವರು ಬಾಲಕಿಯ ಬಳಿ ಹೋಗಿ ವಿಚಾರಿಸಿದಾಗ, ತಾಯಿಯು ಅನಾರೋಗ್ಯದಿಂದಿದ್ದು ಇಬ್ಬರ ಹೊಟ್ಟೆಪಾಡಿಗಾಗಿ ಬೇಡುತ್ತಿರುವುದಾಗಿ ತಿಳಿಸಿದ್ದಾಳೆ.ತದನಂತರ ತಾಯಿಯನ್ನು ಹೋಗಿ ನೋಡಿದಾಗ ಆಕೆ ನೋವಿನಿಂದ ನಡೆಯಲಾಗದೆ ಕಿರುಚುತ್ತಿದ್ದುದನ್ನು ಕಂಡು ವಿಚಾರಿಸಿದಾಗ, ಆಕೆ ಗಂಡ ತೀರಿಕೊಡಿದ್ದು ತಂದೆ ತಾಯಿ ಯಾರು ಇಲ್ಲದೆ ಅರೋಗ್ಯ ಕೂಡ ತೀರಾ ಹದಗೆಟ್ಟು ಅಸಹಾಯಕಳಾಗಿದ್ದೇನೆ, ನನ್ನನ್ನು ಹಾಗೂ ಮಗಳನ್ನು ರಕ್ಷಿಸಿ ಎಂದು ಅಂಗಲಾಚಿದ್ದಾಳೆ. ಕೂಡಲೇ ವಿಶು ಶೆಟ್ಟಿಯವರು ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಬಾಲಕಿಯನ್ನು ಪುನಃ ಬಾಲಮಂದಿರಕ್ಕೆ ದಾಖಲಿಸುವ ಮುಖಾಂತರ ಮುಂದೆ ಆಗಬಹುದಾದಂತಹ ಅನಾಹುತವನ್ನು ತಪ್ಪಿಸಿದಂತಾಗಿದೆ. ಈ ಪ್ರಕರಣದಲ್ಲಿ ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ ಎದ್ದು ಕಾಣುತ್ತದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ರಾಮದಾಸ್ ಪಾಲನ್ ಉದ್ಯಾವರ ಸಹಕರಿಸಿದ್ದಾರೆ.
ಬಾಲಕಿಯರ ಬಾಲ ಮಂದಿರದಲ್ಲಿ ಆಶ್ರಯ ಪಡೆಯುತ್ತಿದ್ದ ಬಾಲಕಿ ಪುನಃ ಬೀದಿಗೆ ಬಿದ್ದಿದ್ದು ಹೇಗೆ ಎಂಬುದು ಪ್ರಶ್ನಾರ್ಥಕ ವಿಷಯವಾಗಿದೆ. ಇಲಾಖೆಯ ಸುಪರ್ದಿಯಿಂದ ಬಾಲಕಿ ಪುನಃ ಬೀದಿಗೆ ಬಿದ್ದ ಬಗ್ಗೆ ವಿಶು ಶೆಟ್ಟಿಯವರು ಆತಂಕ ವ್ಯಕ್ತಪಡಿಸಿದ್ದಾರೆ. ವಿಶು ಶೆಟ್ಟಿಯವರು ರಕ್ಷಿಸಿ ಇಲಾಖೆಯ ಸುಪರ್ದಿಗೆ ಒಪ್ಪಿಸಿದ ಬಾಲಕಿಯರು ಪುನಃ ಬೀದಿಯಲ್ಲಿ ಭಿಕ್ಷಾಟನೆಗೆ ಇಳಿದಿದ್ದು ಮೂರನೇ ಪ್ರಕರಣವಾಗಿದೆ.