ಮಂಗಳೂರು,ಜೂ.27 (DaijiworldNews/HR): ಮತಾಂಧ ಶಕ್ತಿಗಳ ದಾಳಿಗೆ ಸಿಕ್ಕು ಹುತಾತ್ಮರಾದ ಡಿವೈಎಫ್ಐ ನಾಯಕ ಶ್ರೀನಿವಾಸ್ ಬಜಾಲ್ ಅವರ 19ನೇ ಹುತಾತ್ಮ ದಿನದ ಅಂಗವಾಗಿ ಡಿವೈಎಫ್ಐ ಬಜಾಲ್ನಲ್ಲಿರುವ ಭಗತ್ ಸಿಂಗ್ ಭವನದಲ್ಲಿ ಜಿಲ್ಲಾ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸಿತ್ತು.
ಈ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಕಾಮ್ರೆಡ್, "ಶ್ರೀನಿವಾಸ್ ಬಜಾಲ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಸಾಮರಸ್ಯಕ್ಕಾಗಿ ಶ್ರಮಿಸುವವರಲ್ಲಿ ಮುಂಚೂಣಿಯಲ್ಲಿದ್ದರು. ದುಡಿಯುವ ವರ್ಗದ ಪರ ಹೋರಾಟದ ಜೊತೆಗೆ ಕಲೆ, ಸಾಹಿತ್ಯ ಚಟುವಟಿಕೆಯಲ್ಲೂ ಸಕ್ರಿಯರಾಗಿದ್ದರು. ಸೌಹಾರ್ದ ನಾಡು ಕಟ್ಟುವ ಇವರ ಕಾರ್ಯವನ್ನು ಸಹಿಸದ ಮತೀಯ ಶಕ್ತಿಗಳು ಇವರ ಹತ್ಯೆ ಮಾಡಿ ಈ ಚಳುವಳಿಯನ್ನು ಮಟ್ಟ ಹಾಕಲು ಈ ದುಷ್ಕೃತ್ಯ ಎಸಗಿತ್ತು. ಆದರೆ ಅದೇ ಮಣ್ಣಿನಲ್ಲಿ ಇಂದು ಡಿವೈಎಫ್ಐ ಪ್ರಬಲವಾಗಿ ಬೆಳೆದು ನಿಂತಿದೆ" ಎಂದರು.
"ಶ್ರೀನಿವಾಸ್ ಬಜಾಲ್ ಹತ್ಯೆಯಾಗುವ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದ ರೋಗಿಯೊಬ್ಬರಿಗೆ ರಕ್ತದಾನ ಮಾಡಲು ಹೊರಟು ಬಸ್ಸು ಹತ್ತಲು ಬಂದಿದ್ದರು. ಈ ಸಮಯದಲ್ಲಿ ಹೊಂಚುಹಾಕಿದ್ದ ದುಷ್ಕರ್ಮಿಗಳ ತಂಡ ಕೊಲೆ ಮಾಡಿ ಅವರ ರಕ್ತ ರಸ್ತೆಗೆ ಚೆಲ್ಲುವಂತೆ ಮಾಡಿತ್ತು. ಅವರ ನೆನಪಿನಲ್ಲಿ ಡಿವೈಎಫ್ಐ ವರ್ಷ ಪ್ರತೀ ರಕ್ತದಾನ ಮಾಡುವ ಮೂಲಕ ಅವರ ಆದರ್ಶವನ್ನು ಎತ್ತಿಹಿಡಿಯುತ್ತಿದೆ" ಎಂದಿದ್ದಾರೆ.
ಸಭೆಯನ್ನುದ್ದೇಶಿಸಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಂಗಳೂರು ನಗರ ಘಟಕದ ಅಧ್ಯಕ್ಷ ನವೀನ್ ಕೊಂಚಾಡಿ, ಸರಕಾರಿ ವೆನ್ಲಾಕ್ ರಕ್ತ ನಿಧಿ ಸಂಸ್ಥೆಯ ಮೇಲ್ವಿಚಾರಕರಾದ ಆಂಟೊನಿ , ವೈದ್ಯರಾದ ಡಾ ಕಿರಣ್ ಬೋಪಲ್ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಡಿವೈಎಫ್ಐ ಬಜಾಲ್ ಘಟಕದ ಅಧ್ಯಕ್ಷರಾದ ನೂರುದ್ದಿನ್ ಪಕ್ಕಲಡ್ಕ ವಹಿಸಿದ್ದರು. ಡಿವೈಎಫ್ಐ ಬಜಾಲ್ ಘಟಕದ ಕಾರ್ಯದರ್ಶಿ ಧಿರಾಜ್ ಬಜಾಲ್ ಸ್ವಾಗತಿಸಿ ನಿರೂಪಿಸಿದರು ವರಪ್ರಸಾದ್ ವಂದಿಸಿದರು. ರಕ್ತದಾನ ಶಿಬಿರದಲ್ಲಿ 55 ಕ್ಕೂ ಮಿಕ್ಕಿ ಕಾರ್ಯಕರ್ತರು, ರಕ್ತದಾನಿಗಳು ರಕ್ತದಾನ ಮಾಡಿದರು.
ರಕ್ತದಾನ ಶಿಬಿರದ ನೇತೃತ್ವವನ್ನು ಡಿವೈಎಫ್ಐ ಸ್ಥಳೀಯ ಮುಖಂಡರಾದ ಜಗದೀಶ್ ಬಜಾಲ್, ದೀಪಕ್ ಬಜಾಲ್, ಪ್ರಿತೇಶ್ ಎನೆಲ್ಮಾರ್, ಅಶೋಕ ಎನೆಲ್ಮಾರ್, ಆನಂದ, ಪ್ರಶಾಂತ್ ಕುಡ್ತಡ್ಕ, ಮಧುವಂತ್, ಜಗದೀಶ್ ಕುಲಾಲ್, ಉದಯ ಕುಂಟಲಗುಡ್ಡೆ ಮುಂತಾದವರು ವಹಿಸಿದ್ದರು.