ಬಂಟ್ವಾಳ, ಜೂ. 26(DaijiworldNews/HR): ಕೊರೊನಾ ಹಾವಳಿಯಿಂದಾಗಿ ಎರಡನೇ ವರ್ಷವೂ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ದಯಾನೀಯವಾಗುತ್ತಿದ್ದು ರಾಜ್ಯದ ಬಹುತೇಕ ಪೋಷಕರ ಅಪೇಕ್ಷೆಯಂತೆ ಸರಕಾರ ಪೂರ್ಣ ಪ್ರಮಾಣದಲ್ಲಿ ಶಾಲಾ ತರಗತಿಗಳನ್ನು ಪುನಾರಂಭಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕೆಂದು ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಸರಕಾರವನ್ನು ಆಗ್ರಹಿಸಿದೆ.
ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಶುಕ್ರವಾರ ಬಂಟ್ವಾಳದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ದೇಶಾದ್ಯಂತ ಅನ್ ಲಾಕ್ ಪ್ರಕ್ರಿಯೆ ಆರಂಭಗೊಂಡಿದ್ದು ಎಲ್ಲಾ ವಲಯಗಳಲ್ಲೂ ಕಾರ್ಯಚಟುವಟಿಕೆಗಳು ಪುನಾರಂಭಗೊಳ್ಳುತ್ತಿದೆ.ಅದೇ ರೀತಿ ಶಿಕ್ಷಣ ವಲಯದಲ್ಲೂ ಕ್ರಾಂತಿಕಾರಕ ಬದಲಾವಣೆಗೆ ಸರಕಾರ ಚಿಂತಿಸಬೇಕಾಗಿದ್ದು ರಾಜ್ಯದ ಅಸಂಖ್ಯಾತ ವಿದ್ಯಾರ್ಥಿಗಳ ಹಿತ ಕಾಯುವ ನಿಟ್ಟಿನಲ್ಲಿ ಶಾಲೆಗಳನ್ನು ತಕ್ಷಣವೇ ಪುನಾರಂಭಿಸಬೇಕಾಗಿದೆ.
ಕಳೆದ ವರ್ಷ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ತರಗತಿಗಳಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳನ್ನು ಯಾವುದೇ ಮಾನದಂಡವಿಲ್ಲದೆ ಮುಂದಿನ ತರಗತಿಗೆ ತೇರ್ಗಡೆಗೊಳಿಸಲಾಗಿದೆ. ಅದೆಷ್ಟೊ ವಿದ್ಯಾರ್ಥಿಗಳಿಗೆ ಅ,ಆ, ಇ, ಈ, ಎ, ಬಿ, ಸಿ, ಡಿ, ಅಕ್ಷರ ಜ್ಞಾನವೇ ಸಿಗದೆ ಮುಂದಿನ ತರಗತಿಗಳಿಗೆ ತೇರ್ಗಡೆಯಾಗುತ್ತಿದ್ದರೆ ಶಿಕ್ಷಣ ನೀಡುವ ಉದ್ದೇಶ ಸಾಕಾರಗೊಳ್ಳುತ್ತದೆಯೇ? ಎಂದು ಪ್ರಶ್ನಿಸಿರುವ ಸಮಿತಿ, ಆನ್ ಲೈನ್ ಅಥವಾ ವಿದ್ಯಾಗಮ ಶಿಕ್ಷಣಕ್ಕೆ ಒತ್ತು ನೀಡುವ ಬದಲು ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಹೆಚ್ಚು ಪರಿಣಾಮಕಾರಿಯಾದ ತರಗತಿ ಕೊಠಡಿಯಲ್ಲಿ ನಡೆಯುವ ಮುಖಾಮುಖಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬಹುದು, ಕಳೆದ ವರ್ಷ ವಿದ್ಯಾಗಮ ಶಿಕ್ಷಣ ನಡೆಸಲಾಗಿತ್ತಾದರೂ ಗ್ರಾಮೀಣ ಭಾಗಗಳಲ್ಲಿ ಈ ವ್ಯವಸ್ಥೆಯ ಶಿಕ್ಷಣ ಪದ್ದತಿಯಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತುಂಬಾ ತೊಂದರೆ ಅನುಭವಿಸಿದ್ದಾರೆ. ಎಲ್ಲೋ ಜಗಲಿ ಕುಳಿತು ಪಾಠ ಕೇಳುವ ಬದಲು ಶಾಲೆಯಲ್ಲಿಯೇ ಪಾಠ ಕೇಳುವುದು ಉತ್ತಮ ಹಾಗೂ ಸುರಕ್ಷಿತ ಎಂದು ಸಮಿತಿ ಆಗ್ರಹಿಸಿದೆ. ಆನ್ ಲೈನ್ ಶಿಕ್ಷಣದಿಂದ ಉಂಟಾಗಿರುವ ಅವಾಂತರಗಳ ಬಗ್ಗೆ ಮನವಿಯಲ್ಲಿ ಬೆಳಕು ಚೆಲ್ಲಿದ್ದು ಪ್ರಾಥಮಿಕ ಶಾಲೆಗಳಲ್ಲಿ ಒಂದರಿಂದ ಏಳನೇ ತರಗತಿಯನ್ನು ಒಮ್ಮೆಲೆ ಆರಂಭಿಸುವ ಬದಲು ಒಂದರಿಂದ ನಾಲ್ಕನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಒಂದು ದಿನ, ಐದರಿಂದ ಏಳನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಒಂದು ದಿನ ಎನ್ನುವಂತೆ ಶಿಫ್ಟ್ ಮಾದರಿಯಲ್ಲಿ ತರಗತಿ ಆರಂಭಿಸುವಂತೆ ಸಲಹೆ ನೀಡಿದೆ.
ಈಗಾಗಲೇ ಪರೀಕ್ಷಾ ವಿಚಾರವಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಸಾಕಷ್ಟು ಗೊಂದಲಕ್ಕೊಳಕ್ಕಾಗಿ ಮಾನಸಿಕವಾಗಿ ಖಿನ್ನತೆಯನ್ನು ಅನುಭವಿಸುತ್ತಿದ್ದಾರೆ. ಆದಷ್ಟು ಬೇಗ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದೆ. ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಸ್ಥಳಗಳಲ್ಲಿ ಈ ಬಗ್ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಪರೀಕ್ಷೆ ನಡೆಸಬಹುದಾಗಿದೆ. ಕಳೆದ ಬಾರಿ ರಾಜ್ಯಾದ್ಯಂತ ಶಾಲೆ ಆರಂಭಿಸಿದಾಗ ಎಲ್ಲೂ ಕೂಡ ಕೋವಿಡ್ ಪ್ರಕರಣಗಳು ವಿದ್ಯಾರ್ಥಿಗಳಲ್ಲಿ ಕಂಡು ಬಾರದೇ ಇರುವುದು ಗಮನೀಯ ಅಂಶವಾಗಿದೆ.
ರಾಜ್ಯದ ಬಹುತೇಕ ಪಾಲಕರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ತಾವು ಸೂಕ್ತ ಕ್ರಮ ಕೈಗೊಳ್ಳಬೇಕು, ಇಂತಹ ಕಠಿಣ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸರಕಾರ ಕೈಗೊಳ್ಳುವ ನಿರ್ಧಾರಕ್ಕೆ ಪೋಷಕರು ಗಟ್ಟಿಧ್ವನಿ ಎತ್ತಿ ಸರಕಾರದ ಪರ ನಿಲ್ಲುವಂತೆ ಸಮಿತಿ ಆಗ್ರಹಿಸಿದೆ.
ಈ ಸಂದರ್ಭ ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಸದಸ್ಯರಾದ ರಾಮಚಂದ್ರ ಪೂಜಾರಿ ಕರೆಂಕಿ, ದೀಪಕ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.