ಮಂಗಳೂರು, ಜೂ 26 (DaijiworldNews/PY): ಮಾನಸಿಕ ಅಸ್ವಸ್ಥನಾಗಿ ಮಂಜೇಶ್ವರದ ಸ್ನೇಹಾಲಯದಲ್ಲಿ ಆಶ್ರಯ ಪಡೆಯುತ್ತಿದ್ದ ಚಾಮರಾಜನಗರದ ವ್ಯಕ್ತಿ ಹತ್ತು ವರ್ಷದ ಬಳಿಕ ತನ್ನ ಮನೆ ಸೇರಿದ್ದಾರೆ.
ಚಾಮರಾಜನಗರ ಜಿಲ್ಲೆಯ ರಾಮಸಮುದ್ರ ಊರಿನ ನಿವಾಸಿ ಮಹೇಂದ್ರ ತನ್ನ ಪ್ರಾಥಮಿಕ ವಿಧ್ಯಾಬ್ಯಾಸದ ಬಳಿಕ ತನ್ನದೇ ಆದ ಸ್ವಂತ ಅಂಗಡಿಯಲ್ಲಿ ತಮ್ಮ ತಂದೆಯೊಂದಿಗೆ ವ್ಯಾಪಾರವನ್ನು ನಡೆಸುತ್ತಿದ್ದರು. ಒಂದು ದಿನ ಯಾವುದೋ ಕಾರಣಕ್ಕೆ ಉದ್ರೇಕಗೊಂಡು ಮಾನಸಿಕ ಸ್ಥೀಮಿತ ಕಳೆದುಕೊಂಡಿದ್ದರು. ಮಾನಸಿಕ ಅಸ್ವಸ್ಥನಾಗಿದ್ದ ಅವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋದರೂ ಫಲ ನೀಡಲಿಲ್ಲ. ಈತನ ಈ ಪರಿಸ್ಥಿತಿಯನ್ನು ಕಂಡ ಮನೆಯವರು ದಿಕ್ಕು ಕಾಣದೆ ಕಡೆಗೆ ಈತನನ್ನು ತಿರುಪತಿಗೆ ಕರೆದುಕೊಂಡು ಹೋಗಿದ್ದಾರೆ. ತಿರುಪತಿಯಲ್ಲಿ ಪೂಜೆಯ ಸಂದರ್ಭ ಜನಜಂಗುಳಿಯ ಮಧ್ಯೆ ಕಾಣೆಯಾಗಿದ್ದರು. ಈ ಬಗ್ಗೆ ತಿರುಪತಿಯ ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದರು.
ಕಾಣೆಯಾದ ಮಹೇಂದ್ರ ಮರಳಿ ಮನೆಗೆ ಬರುವನು ಎಂಬ ಆಶಾ ಮನೋಭಾವದೊಂದಿಗೆ ಕುಟುಂಬಸ್ಥರು ಮನೆಗೆ ಮರಳಿದ್ದರು. ತಿರುಪತಿಯಿಂದ ಮರಳಿ ಬಂದ ಕುಟುಂಬಸ್ಥರು ಮಹೇಂದ್ರನ ಬರುವಿಕೆಗೆ ಕಾಯುತ್ತಿದ್ದರು. ಆದರೆ ಮಹೇಂದ್ರನ ಸುಳಿವೇ ಇರಲಿಲ್ಲ. ಮತ್ತೆ ಮನೆಯವರು ಚಾಮರಾಜನಗರದ ಪೋಲಿಸ್ ಠಾಣೆಯಲ್ಲಿ ಮಹೇಂದ್ರ ಕಾಣೆಯಾಗಿರುವುದರ ಬಗ್ಗೆ ದೂರು ನೀಡಿದ್ದರು.
ಸ್ನೇಹಾಲಯದ ಜೋಸೆಫ್ ಕ್ರಾಸ್ತಾ ಅವರು ಕೆಲಸದ ಮೇರೆಗೆ ತೆರಳಿದ ವೇಳೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೊಳಕು ಬಟ್ಟೆಯಲ್ಲಿದ್ದ ಮಹೇಂದ್ರನನ್ನು ಕಂಡು ಅವರನ್ನು ತಮ್ಮ ಮಂಜೇಶ್ವರದ ಸ್ನೇಹಾಲಯ ಆಶ್ರಮಕ್ಕೆ ಕರೆತಂದಿದ್ದು, ಅಲ್ಲಿ ಮಹೇಂದ್ರನನ್ನು ಶುಚಿಗೊಳಿಸಿ ಅವನಿಗೆ ಉತ್ತಮವಾದ ಆಹಾರವನ್ನು ನೀಡಿ ಅವನನ್ನು ಆರೈಕೆ ಮಾಡಿದ್ದಾರೆ. ಮಾನಸಿಕ ಅಸ್ವಸ್ಥನಾದ ಮಹೇಂದ್ರನನ್ನು ನಿರಂತರವಾಗಿ ಸಮಾಲೋಚನೆಗೆ ಒಳಪಡಿಸಿದ್ದಾರೆ. ಆರಂಭದಲ್ಲಿ ಮಂಕಾಗಿದ್ದ ಮಹೇಂದ್ರ ಹಂತ ಹಂತವಾಗಿ ಬದಲಾಗಿದ್ದಾರೆ. ನಂತರ ನಡೆದ ಸಮಾಲೋಚನೆಯಲ್ಲಿ ಆತ ತನ್ನ ಊರಿನ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ಈ ವೇಳೆ ಊರಿನ ಬಗ್ಗೆ ಮಾಹಿತಿ ಕಲೆ ಹಾಕಿದ ಸ್ನೇಹಾಲಯ ತಂಡ ಅವನ ಮನೆಯವರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಆರೋಗ್ಯದಲ್ಲಿ ಚೇತರಿಕೆಕಂಡಿದ್ದ ಮಹೇಂದ್ರನನ್ನು ಆತನ ಊರಿಗೆ ಕರೆದುಕೊಂಡು ಹೋಗಲು ಸ್ನೇಹಾಲಯ ತಂಡ ನಿರ್ಧರಿಸಿದ್ದು, ಆತನನ್ನು ಸ್ನೇಹಾಲಯ ತಂಡ ಆತನ ಊರಿಗೆ ಕರೆದೊಯ್ದಿದೆ.
ಹತ್ತು ವರ್ಷದಿಂದ ಕಣ್ಮರೆಯಾಗಿದ್ದ ಮಹೇಂದ್ರನನ್ನು ಕಂಡ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಮಹೇಂದ್ರನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ಸ್ನೇಹಾಲಯಕ್ಕೆ ಕುಟುಂಬಸ್ಥರು ಧನ್ಯವಾದ ಸಲ್ಲಿಸಿದ್ದಾರೆ.
ಸ್ನೇಹಾಲಯದ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೋಸೆಫ್ ಕ್ರಾಸ್ತಾ ಅವರ ಸ್ನೇಹಾಲಯವು ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು , ಇಂತಹ ಹಲವಾರು ಮಂದಿ ಸ್ನೇಹಾಲಯಲ್ಲಿ ಆಶ್ರಯ ಪಡೆದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇಂತಹ ಅನೇಕ ಉತ್ತಮ ಕೆಲಸಗಳು ಸ್ನೇಹಾಲಯ ಸಂಸ್ಥೆಯಿಂದ ಮುಂದುವರೆಯಲಿ ಎಂಬುದು ನಮ್ಮ ಆಶಯ.