ಬೈಂದೂರು, ಜೂ. 26(DaijiworldNews/HR): ತಾಲೂಕಿನ ಉಪ್ಪುಂದ ಗ್ರಾಮದ ಕಾಸನಾಡಿ ಎಂಬಲ್ಲಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ 'ಶ್ರೀ ವರಲಕ್ಷ್ಮೀ' ನೂತನ ಗೃಹದ ಲೋಕಾರ್ಪಣೆ ಸಮಾರಂಭ ಶನಿವಾರ ಜರುಗಿತು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಗೋವಿಂದ ಬಾಬು ಪೂಜಾರಿ ಅವರ ಪೋಷಕರಾದ ಮಂಜಮ್ಮ- ಬಾಬು ಪೂಜಾರಿ ದಂಪತಿಗಳು ನೂತನ ಗೃಹ ಲೋಕಾರ್ಪಣೆಗೊಳಿಸಿದರು.
ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಹಾಗೂ ಮಾಲತಿ ಗೋವಿಂದ ಪೂಜಾರಿ ಅವರು ನೂತನ ಗೃಹದ ಯಜಮಾನರಾದ ವಿಜಯಾ ರಮೇಶ್ ಪೂಜಾರಿ ಅವರಿಗೆ ಬೀಗದ ಕೈ ಹಸ್ತಾಂತರಿಸಿದರು.
ಈ ಸಂದರ್ಭ ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ, "ಟ್ರಸ್ಟೀ ಮೂಲಕ ನಿರ್ಮಿಸಲಾಗಿರುವ ಎರಡನೇ ಮನೆ ಇದಾಗಿದ್ದು, ಇನ್ನು ಎರಡು ಮನೆಗಳು ನಿರ್ಮಾಣ ಹಂತದಲ್ಲಿದೆ. ಆರೋಗ್ಯ ಸೇವೆ, ಅಗತ್ಯವುಳ್ಳವರಿಗೆ ನೆರವು, ಪುಡ್ ಕಿಟ್ ವಿತರಣೆ ಸೇರಿದಂತೆ ಹತ್ತಾರು ಸಾಮಾಜಿಕ ಕಾರ್ಯಗಳನ್ನು ಟ್ರಸ್ಟ್ ಮೂಲಕ ಮಾಡಲಾಗುತ್ತಿದೆ" ಎಂದರು.
ನೂತನ ಗೃಹದ ಯಜಮಾನರಾದ ವಿಜಯಾ ರಮೇಶ್ ಪೂಜಾರಿ ದಂಪತಿಗಳು ಮಾತನಾಡಿ, ಮನೆಯನ್ನು ಪೂರ್ಣಗೊಳಿಸಲು ಆರ್ಥಿಕ ಅಡಚಣೆ ಉಂಟಾದಾಗ ಗೋವಿಂದ ಬಾಬು ಪೂಜಾರಿ ಅವರಿಗೆ ಮನವಿ ಮಾಡಿಕೊಂಡಿದ್ದೆವು. ಅದರಂತೆ ಅಣ್ಣನ ಸ್ಥಾನದಲ್ಲಿ ನಿಂತು ಮನೆಯನ್ನು ಪೂರ್ಣಗೊಳಿಸಿಕೊಟ್ಟಿದ್ದಾರೆ. ಅವರಿಗೆ ಋಣಿಯಾಗಿರುವುದಾಗಿ ತಿಳಿಸಿದರು.
ಈ ಸಂದರ್ಭ ಜ್ಯೋತಿಷಿಗಳಾದ ರಘುನಾಥ ಜೋಯಿಸ್, ಶ್ರೀನಿವಾಸ ಉಬ್ಜೇರಿ, ಎನ್.ಎ. ಪೂಜಾರಿ, ಜಯರಾಮ ಶೆಟ್ಟಿ ಬಿಜೂರು, ಗುರುರಾಜ ಪಂಜು ಪೂಜಾರಿ ಸೇರಿದಂತೆ ಇನ್ನಿತರರು ಇನ್ನಿತರರು ಉಪಸ್ಥಿತರಿದ್ದರು.