ಕಾರ್ಕಳ, ಜೂ 26 (DaijiworldNews/PY): ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಶಿಕ್ಷಕರೊಬ್ಬರ ಮನೆಗೆ ನುಗ್ಗಿ ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಕಳವುಗೈದ ಘಟನೆ ಈದು-ಹೊಸ್ಮಾರ್ ಎಂಬಲ್ಲಿ ನಡೆದಿದೆ.
ಶಿಕ್ಷಕ ಗಣಪತಿ ಶಂಭು ನಾಯ್ಕ ಈ ಕುರಿತು ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದು, ಜೂ23ರಂದು ಪತ್ನಿಯ ಮನೆ ಕುಮಟಕ್ಕೆ ಸಂಸಾರ ಸಮೇತ ಹೋಗಿದ್ದು, ಜೂನ್ 25ರಂದು ಹಿಂತಿರುಗಿದ ಸಂದರ್ಭ ಮನೆಯ ಮುಂಬಾಗಿಲಿನ ಚಿಲಕ ಮುರಿದಿರುವುದು ಕಂಡು ಬಂದಿದೆ. ಕವಾಟಿನಲ್ಲಿ ಇರಿಸಲಾಗಿದ್ದ ಚಿನ್ನಾಭರಣ ಕಳ್ಳವು ಆಗಿರುವುದು ಬೆಳಕಿಗೆ ಬಂದಿದೆ.
ಕಪಾಟಿನಲ್ಲಿದ್ದ ಇರಿಸಲಾಗಿದ್ದ 40 ಗ್ರಾಂ ತೂಕದ ಕರಿಮಣಿ ಸರ, 1.20 ಗ್ರಾಂ ತೂಕದ 2 ಬಳೆಗಳು, 10 ಗ್ರಾಂ ತೂಕದ ಒಂದು ಚಿನ್ನದ ಸರ, 5 ಗ್ರಾಂ ತೂಕದ ಕಿವಿಯೋಲೆ ಒಂದು ಜೊತೆ ಚಿನ್ನಾಭರಣಗಳು ಕಳ್ಳರ ಪಾಲಾಗಿದ್ದು, ಒಟ್ಟು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿದೆ.
ಘಟನಾ ಸ್ಥಳಕ್ಕೆ ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್, ವೃತ್ತನಿರೀಕ್ಷಕ ಸಂಪತ್ಕುಮಾರ್, ಗ್ರಾಮಾಂತರ ಎಸ್ಐ ತೇಜಸ್ವಿ ಟಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆದಿಸಿದ್ದಾರೆ. ಶ್ವಾನದಳ ಬೆರಳಚ್ಚು ತಜ್ಞರ ತಂಡವನ್ನು ಸ್ಥಳಕ್ಕೆ ಕರೆಯಿಸಿ, ಶೋಧ ನಡೆಸಲಾಯಿತು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೂಡಂಗಡಿಯತ್ತ ಸಾಗಿದರೆ ಕಳ್ಳರು?
ಘಟನಾ ಸ್ಥಳದ ಅನತಿ ದೂರದಲ್ಲಿ ಗೂಡಂಗಡಿಯೊಂದಿದೆ. ಪೊಲೀಸ್ ಶ್ವಾನ ದಳವು ಘಟನಾ ಸ್ಥಳದಿಂದ ಮುಂದೆ ಓಡುತ್ತಾ ಗೂಡಂಗಡಿಯತ್ತ ಸಾಗಿದೆ. ಕಳ್ಳರು ಕೃತ್ಯ ಎಸಗಿ ಅದೇ ಗೂಡಂಗಡಿಯತ್ತ ಸಾಗಿದರೆ? ಎಂಬುದು ಯಕ್ಷಪ್ರಶ್ನೆಯಾಗಿ ಕಾಡತೊಡಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೂರ್ಣ ಮಾಹಿತಿ ತಿಳಿದವ ಸಹಕಾರ
ಮನೆ ಮಂದಿ ಊರಿನತ್ತ ಸಾಗಿರುವ ಮಾಹಿತಿಯನ್ನು ಅರಿತುಕೊಂಡಿರುವ ಕೆಲವರು, ಕೃತ್ಯ ಎಸಗಿದ ತಂಡದೊಂದಿಗೆ ಕೈ ಜೋಡಿಸಿರಬಹುದು. ಈ ಎಲ್ಲ ಅಂಶಗಳನ್ನು ಮುಂದಿಟ್ಟು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.