ಉಡುಪಿ, ಜೂ 26 (DaijiworldNews/MS): ಕೇದಾರೋತ್ಥಾನ ಬೇಸಾಯ ಅಭಿಯಾನಕ್ಕೆ ಬಂದಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿದ್ದ ಕಾರು ರಸ್ತೆ ಮಧ್ಯೆ ಕೆಸರಿನಲ್ಲಿ ಸಿಲುಕಿಕೊಂಡು ಸಚಿವರು ಪರದಾಡಿದ ಘಟನೆ ಉಡುಪಿಯ ಕಡೆಕಾರು ಬಳಿಯ ರಸ್ತೆಯಲ್ಲಿ ನಡೆದಿದೆ.
ಭಾರಿ ಮಳೆಗೆ ತೇವಗೊಂಡಿದ್ದ ರಸ್ತೆಯಲ್ಲಿದ್ದ ಕೆಸರಿನಲ್ಲಿ ಇನ್ನೋವಾ ಕಾರು ಸಿಲುಕಿ ಪರದಾಡಿದ ಸಚಿವ ಬಿ.ಸಿ.ಪಾಟೀಲ್ ಅವರ ನೆರವಿಗೆ ಕೃಷಿ ಚಟುವಟಿಕೆ ಭಾಗಿಯಾಗಿದ್ದ ಯುವಕರು ಸಹಾಯಕ್ಕೆ ಧಾವಿಸಿದ್ದಾರೆ. ಕೊನೆಗೂ, ಕೆಸರಿನಲ್ಲಿ ಹೂತು ಹೋದ ಸಚಿವ ಪಾಟೀಲರ ಕಾರನ್ನು ಯುವಕರೆಲ್ಲರೂ ಸೇರಿ ಮೇಲೆತ್ತಿದರು.
ಕೇದಾರೋತ್ಥಾನ ಬೇಸಾಯ ಅಭಿಯಾನಕ್ಕೆ ಬಂದಿದ್ದ ಸಚಿವ ಬಿಸಿ ಪಾಟೀಲ್ ಎರಡು ಸಾವಿರ ಎಕ್ರೆ ಹಡಿಲು ಜಾಮೀನು ನಾಟಿ ಕಾರ್ಯದಲ್ಲಿ ಭಾಗಿಯಾಗಿ ಬಳಿಕ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮಕ್ಕೆ ಹೊರಟ ವೇಳೆ ಕಾರು ಕೆಸರಿನಲ್ಲಿ ಹೂತು ಹೋಗಿತ್ತು.