ಕಾರ್ಕಳ, ಜೂ. 26(DaijiworldNews/HR): ದೇಶದ ದೈನಂದಿನ ವ್ಯವಹಾರದ 86 ಶೇ. ಹಣವನ್ನು ನೋಟ್ ಬ್ಯಾನ್ ಹೆಸರಲ್ಲಿ ಅಮಾನ್ಯಗೊಳಿಸಿದ್ದರ ಪರಿಣಾಮವಾಗಿ, ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಉಂಟಾಗಿದ್ದ ನಷ್ಟವನ್ನು ಸರಿದೂಗಿಸಲು ಅವೈಜ್ಞಾನಿಕ ರೀತಿಯ ತೆರಿಗೆ ಹೇರಿಕೆಯ ಪರಿಣಾಮವಾಗಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆಗಿದೆಯೇ ಹೊರತು, ಯುಪಿಎ ಅವಧಿಯ ಇಂಧನ ಬಾಂಡ್ಗಳ ಸಾಲ ತೀರಿಸುವ ಕಾರಣಕ್ಕಾಗಿ ಅಲ್ಲ. ಬಿಜೆಪಿ ತನ್ನ ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ನ ಮೇಲೆ ಗೂಬೆ ಕೂರಿಸಿ ದೇಶದ ಜನರ ದಿಕ್ಕು ತಪ್ಪಿಸಲು ನೋಡುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರಸ್ ಆರೋಪಿದೆ.
ಆಡಳಿತಾರೂಢ ಸರಕಾರಗಳು ಜನರ ಅನುಕೂಲಕ್ಕಾಗಿ ಮಾಡುವ ಬೆಲೆ ನಿಯಂತ್ರಣ , ಸಬ್ಸಿಡಿ ನೀಡಿಕೆಯೇ ಮೊದಲಾದ ಕಾರಣದಿಂದಾಗಿ ಉಂಟಾಗುವ ವಿತ್ತೀಯ ಕೊರತೆಯನ್ನು ಸರಿದೂಗಿಸಲು ಕೆಲವೊಂದು ಕ್ಷೇತ್ರಗಳಲ್ಲಿ ಇಂತಹ ಬಾಂಡ್ ರೂಪದ ಸಾಲಗಳು ಒಂದು ಸಹಜ ಪ್ರಕ್ರಿಯೆ ಮತ್ತು ಇದು ಅನಿವಾರ್ಯವೂ ಆಗಿದೆ. ಓಯಿಲ್ ಬಾಂಡ್ ಗಳು ಇಂತಹ ಒಂದು ಪ್ರಕ್ರಿಯೆಯ ಭಾಗವಾಗಿದ್ದು, ಇಂತಹ ಸಾಲದ ಬಾಂಡ್ ಗಳ ಪಿತಾಮಹರೇ ಬಿಜೆಪಿಯವರು ಎನ್ನ ಬಹುದಾಗಿದೆ. 2002 ರಲ್ಲಿ ಅಂದಿನ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರ ಮೊಟ್ಟ ಮೊದಲ ಬಾರಿಗೆ ,9000 ಕೋಟಿ ಮೌಲ್ಯದ ಪೆಟ್ರೋಲ್ ಬಾಂಡ್ ನೀಡಿತ್ತು ಎನ್ನುವುದು ಉಲ್ಲೇಖನೀಯ ಎಂದು ಕಾಂಗ್ರೆಸ್ ಹೇಳಿದೆ.
ಇನ್ನು ವಿವಿಧ ಹಂತಗಳಲ್ಲಿ ಒಟ್ಟು 1,44,186 ಕೋಟಿ ರೂ. ಪೆಟ್ರೋಲ್ ಉತ್ಪನ್ನ ಸಂಸ್ಥೆಗಳಿಂದ ಒಯಿಲ್ ಬಾಂಡ್ ನೀಡಿ ಸಾಲ ಮಾಡಿತ್ತು. ಇದರಲ್ಲಿ 9763 ಕೋಟಿ ರೂ. ಈ ಅವದಿ ಯಲ್ಲಿಯೇ ಸಂದಾಯವಾಗಿ 2013-14ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಒಟ್ಟು ಓಯಿಲ್ ಬಾಂಡ್ ಸಾಲದ ಮೊತ್ತ 1,34,423 ಕೋಟಿ ರೂ. ಗೆ ಇಳಿಕೆಯಾಗಿತ್ತು. ಆದರೆ ಬಿಜೆಪಿ ಪೆಟ್ರೋಲ್ ಬೆಲೆ ಏರಿಕೆಗೆ ಯುಪಿಎ ಅವದಿಯ ಒಯಿಲ್ ಬಾಂಡನ್ನೇ ಕಾರಣವಾಗಿಸಿ ಕಾಂಗ್ರಸ್ಸಿನ ತೇಜೋವಧೆ ಮಾಡುವ ಗುರಿಯೊಂದಿಗೆ, 2018ರಲ್ಲಿ ತಾನು ಯುಪಿಎ ಅವದಿಯ ಎಲ್ಲ ಒಯಿಲ್ ಬಾಂಡ್ ಸಾಲ ತೀರಿಸಿದ್ದೇವೆ ಎಂದು ಹೇಳಿತ್ತಾದರೂ ಅದು ತೀರಿಸಿದ್ದು 2015ರಲ್ಲಿ ಮೆಚ್ಯೂರಿಟಿಗೊಂಡ ಬಡ್ಡಿ ಸಮೇತ 3500 ಕೋಟಿ ರೂ. ಮೊತ್ತ ಮಾತ್ರ.
ವಾಸ್ತವದಲ್ಲಿ ಬಾಕಿ ಉಳಿದಿರುವ ಒಟ್ಟು ಎಲ್ಲ ಬಾಂಡುಗಳ ರೀಪೇಮೆಂಟ್ ಮೌಲ್ಯ ಬಡ್ಡಿಯೂ ಸೇರಿ 1,70,923 ಕೋಟಿ ರೂ. ಆಗಿದ್ದು, ದೇಶದ ಖಜಾನೆಯಲ್ಲಿ ಈಗಾಗಲೇ 2020- 21ರ ಆರ್ಥಿಕ ವರ್ಷದ ಸರಿಸುಮಾರು 4.28ಲಕ್ಷ ಕೋಟಿ ರೂ. ಪೆಟ್ರೋಲ್ ಡೀಸಿಲ್ ತೆರಿಗೆ ಹಣ ಸಂಗ್ರಹಿತವಾಗಿದೆ. ಇದು ಜನರ ಹಣ. ಈ ಹಣವನ್ನು ಬಳಸಿಕೊಂಡು ಪೆಟ್ರೋಲ್ ಡೀಸಿಲ್ ಬೆಲೆ ಇಳಿಸಿ ಜನರಿಗೆ ಕಡಿಮೆ ಬೆಲೆಯಲ್ಲಿ ದಿನ ಬಳಕೆಯ ವಸ್ತುಗಳು ದೊರೆಯುವಂತೆ ಮಾಡುವುದು ಸರಕಾರದ ಕರ್ತವ್ಯವಾಗಿದೆ. ಆದರೆ ತನ್ನ ಇಚ್ಚಾ ಶಕ್ತಿಯ ಕೊರತೆಯ ಅಪ್ರಬುದ್ದ ಆರ್ಥಿಕ ನಿಲುವಿಗೆ ಜನರನ್ನು ಬಲಿಕೊಟ್ಟು, ಅದಕ್ಕೆ ಕಾಂಗ್ರಸ್ ಪಕ್ಷವನ್ನು ಕಾರಣವಾಗಿಸುವ ಬಿಜೆಪಿಯ ಹುನ್ನಾರವನ್ನು ಕಾಂಗ್ರಸ್ ಸಹಿಸದು ಎಂದು ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.