ಉಡುಪಿ, ಜೂ. 26(DaijiworldNews/HR): ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 50 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಒಟ್ಟು 1.28 ಕೋಟಿ ರೂ. ಮೌಲ್ಯದ ಗಾಂಜಾ ಹಾಗೂ ಮತ್ತಿತರ ಡ್ರಗ್ಸ್ಗಳನ್ನು ಇಂದು ನಾಶಪಡಿಸಲಾಯಿತು.
103 ಕೆಜಿ 474 ಗ್ರಾಂ ಗಾಂಜಾ, 101 ಗ್ರಾಂ ಹೈಡ್ರೋವೀಡ್ ಗಾಂಜಾ ,1362 ಎಂ.ಡಿ.ಎಂ.ಎ. ನಿದ್ರಾಜನಕ ಮಾತ್ರೆಗಳು ಹಾಗೂ 990 ಎಲ್.ಎಸ್ಡಿ. ಸ್ಟ್ರಿಪ್ಸ್ ಸೇರಿ ಒಟ್ಟು1.28 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಿಲ್ಲಾ ಡ್ರಗ್ ವಿಲೇವಾರಿ ಸಮಿತಿಯ ಅಧ್ಯಕ್ಷರು ಹಾಗೂ ಪೊಲೀಸ್ ಅಧೀಕ್ಷಕರಾದ ಎನ್. ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ, ಸಮಿತಿಯ ಸದಸ್ಯರಾದ ಸುಧಾಕರ್ ಸದಾನಂದ ನಾಯ್ಕ್, ಉಡುಪಿ ಉಪವಿಭಾಗ ಹಾಗೂ ಎಸ್. ವಿಜಯ ಪ್ರಸಾದ್, ಕಾರ್ಕಳ ಉಪವಿಭಾಗರವರ ಸಮ್ಮುಖದಲ್ಲಿ ನಾಶಗೊಳಿಸಲಾಯಿತು.
ವಿಲೇವಾರಿಗೊಳಿಸಲಾದ ಪ್ರಕರಣಗಳಲ್ಲಿ ಮಣಿಪಾಲ ಠಾಣೆಯ 12 ಪ್ರಕರಣ, ಉಡುಪಿ ನಗರ ಠಾಣೆಯ 10 ಪ್ರಕರಣ, ಸೆನ್ ಅಪರಾಧ ಠಾಣೆಯ 8 ಪ್ರಕರಣ, ಕುಂದಾಪುರ ಠಾಣೆಯ 6 ಪ್ರಕರಣ, ಕಾಪು ಠಾಣೆಯ 5 ಪ್ರಕರಣ, ಮಲ್ಪೆ, ಕುಂದಾಪುರ ಗ್ರಾಮಾಂತರ ಹಾಗೂ ಪಡುಬಿದ್ರೆ ಠಾಣೆಯ ತಲಾ 2 ಪ್ರಕರಣ ಹಾಗೂ ಗಂಗೊಳ್ಳಿ, ಹಿರಿಯಡ್ಕ ಮತ್ತು ಶಿರ್ವಾ ಠಾಣೆಯಿಂದ ತಲಾ 1 ಪ್ರಕರಣ ಒಟ್ಟು 50 ಪ್ರಕರಣ ಒಳಗೊಂಡಿರುತ್ತದೆ.
ಇನ್ನು ಕಾಪು ಠಾಣೆಯಲ್ಲಿ 2008ರಲ್ಲಿ ವರದಿಯಾದ 1 ಪ್ರಕರಣ, ಜಿಲ್ಲೆಯ ಇತರ ಠಾಣೆಗಳಲ್ಲಿ ವರದಿಯಾದ 2011ರ 2 ಪ್ರಕರಣ, 2012, 2013, 2016ರಲ್ಲಿ ತಲಾ 1 ಪ್ರಕರಣ, 2018ರ 3 ಪ್ರಕರಣ, 2019ರ 7 ಪ್ರಕರಣ, 2020ರ 27 ಹಾಗೂ 2021ರ 7 ಪ್ರಕರಣಗಳು ಒಳಗೊಂಡಿರುತ್ತದೆ. ಇವುಗಳ ಪೈಕಿ 6 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, 1 ಖುಲಾಸೆಗೊಂಡಿದ್ದು, 1 ಪ್ರಕರಣದಲ್ಲಿ ಆರೋಪಿತ ಮೃತನಾಗಿದ್ದು, 20 ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಉಳಿದ 22 ಪ್ರಕರಣಗಳು ತನಿಖೆಯಲ್ಲಿದೆ.
ಮಾದಕ ದ್ರವ್ಯ ನಾಶಗೊಳಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದ ಪೊಲೀಸ್ ಅಧಿಕಾರಿಯವರ ಕಾರ್ಯಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಪೊಲೀಸ್ ವರಿಷ್ಟಾಧಿಕಾರಿಯವರು ಇನ್ನು ಮುಂದಕ್ಕೂ ಕೂಡಾ ಇಂತಹ ಪ್ರಕರಣಗಳನ್ನು ಹೆಚ್ಚು ಹೆಚ್ಚು ಪತ್ತೆ ಹಚ್ಚಿ, ಉಡುಪಿ ಜಿಲ್ಲೆಯನ್ನು ಮಾದಕ ವ್ಯಸನಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ಶ್ರಮಿಸಬೇಕೆಂದು ಕರೆ ನೀಡಿದರು.
ಈ ಕಾರ್ಯಾಚರಣೆಯಲ್ಲಿ ಮಂಜುನಾಥ್, ಪೊಲೀಸ್ ನಿರೀಕ್ಷಕರು ಸಿ.ಇ.ಎನ್. (ಡಿಸಿಬಿ) ಪೊಲೀಸ್ ಠಾಣೆ, ಮಂಜುನಾಥ ಗೌಡ, ಪೊಲೀಸ್ ನಿರೀಕ್ಷಕರು, ಮಣಿಪಾಲ ಠಾಣೆ, ಪ್ರಮೋದ್ ಕುಮಾರ್, ಪೊಲೀಸ್ ನಿರೀಕ್ಷಕರು, ಉಡುಪಿ ನಗರ ಠಾಣೆ, ಸಂಪತ್ ಕುಮಾರ್, ಪ್ರಭಾರ ಪೊಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತ ಮತ್ತು ಪಿ.ಎಸ್.ಐ.ರವರಾದ ರಾಘವೇಂದ್ರ, ಕಾಪು ಠಾಣೆ, ಸದಾಶಿವ ಗವರೋಜಿ, ಕುಂದಾಪುರ ಠಾಣೆ, ಸುಧಾ ಪ್ರಭು, ಕುಂದಾಪುರ ಗ್ರಾಮಾಂತರ ಠಾಣೆ, ದಿಲೀಪ್, ಪಡುಬಿದ್ರಿ ಠಾಣೆ, ನಂಜಾನಾಯ್ಕ್, ಗಂಗೊಳ್ಳಿ ಠಾಣೆ, ಶ್ರೀಶೈಲ ಮುರಗೋಡ, ಶಿರ್ವ ಠಾಣೆ, ರಾಜಶೇಖರ ವಂದಲಿ, ಮಣಿಪಾಲ ಠಾಣೆ, ಮಾರುತಿ ಜಿ ಗೌಡ, ಆಯುಷ್ ಸಂಸ್ಥೆ, ನಂದಿಕೂರು ಹಾಗೂ ಪ್ರಕಾಶ್ ಎ.ಎಸ್.ಐ, ಡಿಸಿಆರ್ಬಿ, ಉಡುಪಿ ಹಾಗೂ ವಿವಿಧ ಠಾಣೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.