ಕಾರ್ಕಳ, ಜೂ 26 (DaijiworldNews/PY): "ನೆಹರೂ ಕುಟುಂಬದವರ ಅಧಿಕಾರದ ದಾಹದಿಂದ ಅಂದು ದೇಶ ವಿಭಜನೆಯಾಯಿತು. 10 ವರ್ಷಗಳ ಕಾಲ ಕಾಯುತ್ತಿದ್ದರೆ, ಅಖಂಡ ಭಾರತಕ್ಕೆ ಸ್ವತಂತ್ರವಾಗುತ್ತಿತ್ತು. ಭಾರತದ ಕನಸು ನನಸಾಗುತ್ತಿತ್ತು" ಎಂದು ಆರ್ಎಸ್ಎಸ್ ಮುಖಂಡ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದ್ದಾರೆ.
1975 ರ ತುರ್ತು ಪರಿಸ್ಥಿತಿಯ ಕರಾಳ ದಿನಗಳು ಹೋರಾಟದ ರೋಚಕ ನೆನಪುಗಳು ಕುರಿತು ಶಾಸಕರ ಕಚೇರಿಯಲ್ಲಿ ಆಯೋಜಿಸಿದ್ದ ಲೈವ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಮೆರವಣಿಗೆ, ಸತ್ಯಾಗ್ರಹದೊಂದಿಗೆ ಲಕ್ಷಾಂತರ ದೇಶಭಕ್ತರ ಬಲಿದಾನದ ಕಾರಣದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಭ್ರಷ್ಟಾಚಾರ, ನಿರುದ್ಯೋಗ, ಸ್ವಜನ ಪಕ್ಷಪಾತದ ಆಡಳಿತ ನಡೆದಿದ್ದರಿಂದ ಜನರು ದಂಗೆ ಏಳುವಂತಾಯಿತು. ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ದೇಶಾದ್ಯಂತ ಇಂದಿರಾ ಗಾಂಧಿ ವಿರುದ್ದ ಪ್ರತಿಭಟನೆಗಳು ನಡೆದವು. ಆಗಿನ ರೈಲ್ವೆ ಸಚಿವರು ಆಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದ್ದರು. ಇಂದಿರಾ ಗಾಂಧಿ ಅವರ ಅಧಿಕಾರ ಉಳಿಸಿಕೊಳ್ಳಲು ಕಾನೂನು ಬಳಸಿ, ಮಧ್ಯರಾತ್ರಿ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದರು. ರಾತ್ರೋರಾತ್ರಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ ಅಡ್ವಾಣಿ ಅವರನ್ನು ಬಂಧಿಸಲಾಯಿತು" ಎಂದು ಹೇಳಿದ್ದಾರೆ.
ತುರ್ತು ಪರಿಸ್ಥಿತಿಯ ನಂತರ ಜನತಾ ಪಕ್ಷವು ಭಾರಿ ಬೆಂಬಲದೊಂದಿಗೆ ಜಯ ಸಾಧಿಸಿತು. ಈ ಸಂದರ್ಭ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಇಂದಿರಾ ಗಾಂಧಿ ಅವರು, "ಆರ್ಎಸ್ಎಸ್ನ ಪಿಸುಮಾತು ಪ್ರಚಾರದಿಂದ ನಾನು ಸೋತೆ. ತುತುಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದ ಪರಿಣಾಮ ಇಂದು ದೇಶ ಪ್ರಬಲವಾಗಿದೆ" ಎಂದಿದ್ದಾರೆ.