ಉಡುಪಿ, ಜೂ. 26(DaijiworldNews/HR): ಉಡುಪಿಯ ಕಡೆಕಾರಿನಲ್ಲಿ ಯೋಜಿಸಿರುವ ಹಡಿಲು ಭೂಮಿ ಕೃಷಿ ಚಟುವಟಿಕೆಯನ್ನು ಕರ್ನಾಟಕ ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಸ್ವತಹ ಗದ್ದೆಯಲ್ಲಿ ಇಳಿದು ನಾಟಿ ಮಾಡಿ, ಟ್ರಾಕ್ಟರ್ ಓಡಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು "ಇಂದು ನಿಜವಾದ ರೈತ ರೊಂದಿಗಿನ ದಿನ ನಡೆಯುತ್ತಾ ಇದೆ. ಸರಕಾರ ಮಾಡಬೇಕಾದ ಕೆಲಸ ಶಾಸಕ ರಘುಪತಿ ಭಟ್ ಮಾಡುತ್ತಾ ಇದ್ದಾರೆ. ಇಂತಹ ಕೆಲಸಗಳು ಸರಕಾರಕ್ಕೆ ಮಾರ್ಗದರ್ಶಿ ಮಾಡುವ ಕಾರ್ಯಕ್ರಮಗಳು. ಭೂಮಿ ಯನ್ನು ಹಡಿಲು ಬಿಡುವುದು ರಾಷ್ಟ್ರದ್ರೊಹ ಮಾಡಿದಂತೆ. ಭೂಮಿಯನ್ನು ಬರಡು ಬಿಡುವುದು ಭೂಮಿಯನ್ನು ಬಂಜೆ ಮಾಡಿದಂತೆ. ದೇಶದಲ್ಲಿ 60 ಶೇಕಡಾ ಉದ್ಯೊಗ ಕೃಷಿಯಿಂದಲೇ ಇರುವುದು. ರಾಜ್ಯದಲ್ಲಿ 15 ಲಕ್ಷ ಹೆಕ್ಟೇರ್ ಹಡಿಲು ಭೂಮಿ ಇದೆ. ನಾವು ಈಗ ಎಲ್ಲೆಡೆ ರಾಸಾಯನಿಕ ಬಳಸಿ ಕೃಷಿ ಮಾಡುತ್ತಾ ಇದ್ದೆವೆ. ಈ ನಡುವೆ ಸಾವಯವ ಕೃಷಿಗೆ ಶಾಸಕ ರಘುಪತಿ ಭಟ್ ಒತ್ತು ನೀಡಿರುವುದು ಉತ್ತಮ ವಿಚಾರ. ಸಾವಯವ ಕೃಷಿಗೆ ಒತ್ತು ನೀಡಿ ಸರಕಾರ 500 ಕೋಟಿ ರುಪಾಯಿ ಯನ್ನು ಬಿಡುಗಡೆ ಮಾಡಿದೆ. ಸಾವಯವ ಕೃಷಿಯಿಂದ ಜನರ ಆರೋಗ್ಯದ ಜೊತೆಗೆ ಭೂಮಿಯ ಫಲವತ್ತತೆ ಕೂಡಾ ಹೆಚ್ಚಾಗುತ್ತದೆ. ಎಲ್ಲಾ ಜನಪ್ರತಿನಿದಿಗಳು ಇದನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು" ಎಂದರು
ಇನ್ನು ಗದ್ದೆಯಲ್ಲಿ ಸ್ವತಹ ಟ್ರ್ಯಾಕ್ಟರ್ ಓಡಿಸಿದ ಅನುಭವವನ್ನು ಹಂಚಿಕೊಂಡ ಸಚಿವರು "ನಾವು ಕೂಡಾ ಕೃಷಿಕರೇ. ನಾವು ಸಣ್ಣವರಿರುವಾಗ ಗದ್ದೆಯಲ್ಲಿ ನಾಟಿ ಮಾಡಿದ್ದೇವೆ. ತದನಂತರ ಪೋಲಿಸ್ ಇಲಾಖೆಯ ಸೇವೆ ಮತ್ತು ಚಲನಚಿತ್ರ ಕಾರ್ಯದಲ್ಲಿ ಉಳುಮೆ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಈಗ ಮತ್ತೆ ಈ ಅವಕಾಸ ಸಿಕ್ಕಿದ್ದು ತುಂಬಾ ಸಂತೋಷ ಆಗಿದೆ" ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಉದ್ಯಮಿ ಭುವನೇಂದ್ರ ಕಿದಿಯೂರು, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.