ಮಂಗಳೂರು, ಜೂ. 25 (DaijiworldNews/SM): ಕಾಂಗ್ರೆಸ್ ಅಧಿಕಾರದ ಕನಸು ಕಾಣುತ್ತಿದೆ. ಆದರೆ, 2023ರಲ್ಲಿ ಮತ್ತೆ ಬಿಜೆಪಿಯೇ ಆಡಳಿತಕ್ಕೆ ಬರಲಿದೆ. ಕೂಸು ಹುಟ್ಟೋ ಮುನ್ನ ಕುಲಾಯಿ ಹೊಳಿಸಿದರು ಅನ್ನೋ ಪರಿಸ್ಥಿತಿ ಕಾಂಗ್ರೆಸ್ ಪಕ್ಷದ್ದು ಎಂದು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಶಿವಕುಮಾರ್, ಸಿದ್ಧರಾಮಯ್ಯ ಅವರದ್ದು ಬೇರೆ ಬೇರೆ ಬಣಗಳಿವೆ. ಅವರ ನಡುವೆಯೇ ಒಮ್ಮತವಿಲ್ಲ. ಕಾಂಗ್ರೆಸ್ ನಲ್ಲಿ ಈಗಾ ಮೂರಾಬಟ್ಟೆಯಾಗಿದೆ ಎಂದು ಸಚಿವ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಜಾರಕಿಹೊಳಿ ರಾಜೀನಾಮೆ ಮಾತು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅವರು ರಾಜೀನಾಮೆ ಕೊಡೋದು ಏನೂ ಆಗಿಲ್ಲ. ಅವರು ಹೀಗೇಯೇ ಮುಂದುವರೆಯೋದು ಸೂಕ್ತವಾಗಿದೆ. ಅವರು ಕಾಂಗ್ರೆಸ್ ನಲ್ಲಿ ಮೋಸ ಆಯ್ತು ಅಂತ ಬಿಜೆಪಿಗೆ ಬಂದವರಾಗಿದ್ದಾರೆ. ಬಿಜೆಪಿಯಲ್ಲಿ ಮೋಸ ಮಾಡಿದ್ದಾರೆ ಅಂದಿಲ್ಲ, ಅಂತಹ ಪ್ರಶ್ನೆಯೇ ಇಲ್ಲ. ಸಿಡಿ ಜಾಲ ಸೇರಿ ಬೇರೆ ಬೇರೆ ಕಾರಣಕ್ಕೆ ಈ ವಿದ್ಯಮಾನ ನಡೀತಿದೆ. ಬಿಜೆಪಿ ಪಕ್ಷದಲ್ಲಿ ಯಾರೂ ಅವರಿಗೆ ಮೋಸ ಮಾಡಿಲ್ಲ. ಸರ್ಕಾರ ಕಾನೂನು ಮತ್ತು ನ್ಯಾಯದ ಪರ ನಿಲ್ಲುತ್ತೆ. ಜಾರಕಿಹೊಳಿಯವರು ಅಪಾದನೆ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ ಎಂದು ಮಂಗಳೂರಿನಲ್ಲಿ ಬಿ.ಸಿ.ಪಾಟೀಲ್ ಹೇಳಿದ್ದಾರೆ.