ಕಾರ್ಕಳ, ಜೂ 25 (DaijiworldNews/PY): 15 ವರ್ಷದೊಳಗಿನ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸುವ ಮೂಲಕ ಮುಂಜಾಗೃತೆ ಕೈಗೊಳ್ಳಲು "ವಾತ್ಸಲ್ಯ" ಎಂಬ ಹೆಸರಿನಡಿಯಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ, ರಾಜ್ಯ ಸರಕಾರದ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ವಿಕಾಸ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಕೊರೊನಾ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಕೀಯ ವ್ಯವಸ್ಥೆ ಹಾಗೂ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಜತೆಗೆ ಹೆಬ್ರಿ ಮತ್ತು ಕಾರ್ಕಳ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕಗಳು ನಿರ್ಮಾಣ ಹಂತದಲ್ಲಿದ್ದು, ಜುಲೈ ತಿಂಗಳಲ್ಲಿ ಕಾರ್ಯಾರಂಭಗೊಳ್ಳಲಿವೆ" ಎಂದರು.
"ಇದೀಗ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ವಾತ್ಸಲ್ಯ ಎಂಬ ಹೆಸರಿನಡಿ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ. ಒಟ್ಟು 230 ಅಂಗನವಾಡಿ ಹಾಗೂ 220 ಸರಕಾರಿ ಶಾಲೆಗಳಲ್ಲಿ ಖಾಸಗಿ ಶಾಲಾ ಮಕ್ಕಳನ್ನು ಸೇರಿಸಿಕೊಂಡು ಈ ಶಿಬಿರ ಏರ್ಪಡಿಸಲಿದ್ದೇವೆ. ಜೂ.28ರಂದು ಶಿಬಿರಕ್ಕೆ ಚಾಲನೆ ದೊರೆಯಲಿದ್ದು, ಪ್ರತೀ ದಿನ 10 ಕಡೆಗಳಲ್ಲಿ ಶಿಬಿರ ಆಯೋಜನೆಗೊಳ್ಳಲಿದೆ. ಮುಂದಿನ ಜುಲೈ ಮತ್ತು ಆಗಸ್ಟ್ ಎರಡು ತಿಂಗಳಲ್ಲಿ 40 ಸಾವಿರಕ್ಕೂ ಅಧಿಕ ಮಕ್ಕಳು ಶಿಬಿರದಲ್ಲಿ ಭಾಗವಹಿಸಲಿದ್ದು, ಪ್ರತೀ ದಿನ 100 ರಿಂದ 150 ಮಕ್ಕಳಿಗೆ ತಪಾಸಣೆ ನಡೆಯಲಿದೆ. ಶಿಬಿರದಲ್ಲಿ ಮಕ್ಕಳ ಪೌಷ್ಟಿಕತೆ ಮತ್ತು ಹ್ಯುಮಿನಿಟಿ ಪವರ್ ಹೆಚ್ಚಿಸುವ ಔಷಧಿಯನ್ನು ಉಚಿತವಾಗಿ ನೀಡಲಿದ್ದು, ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗೂ ನೆರವಾಗುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ" ಎಂದು ತಿಳಿಸಿದರು.
ತಾಲೂಕಿನ ಆರೋಗ್ಯ ಇಲಾಖೆಯಡಿ ಈಗಾಗಲೇ ಅಪೌಷ್ಟಿಕತೆಯಿಂದ ಬಳಲುವ 241 ಮಕ್ಕಳು ಮತ್ತು ವಿವಿಧ ರೋಗಗಳಿಂದ ಬಳಲುವ 430 ಮಕ್ಕಳ ಸಹಿತ ಒಟ್ಟು 675 ಮಕ್ಕಳನ್ನು ಈಗಾಗಲೇ ಗುರುತಿಸಲಾಗಿದೆ. ಒಟ್ಟಿನಲ್ಲಿ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಪೂರ್ವ ತಯಾರಿಯನ್ನು ನಡೆಸಲಾಗಿದ್ದು, ಇದೊಂದು ಮೆಘಾಮೇಳದಂತಹ ಕಾರ್ಯಕ್ರಮವಾಗಿದ್ದು, ಪೋಷಕರು ತಮ್ಮ ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸಿ ಕೈಜೋಡಿಸುವಂತೆ ವಿನಂತಿಸಿಕೊಂಡರು.
"ಪೆರ್ವಾಜೆ ಶಾಲೆಯಲ್ಲಿ ಜೂ.28ರ ಬೆಳಗ್ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಉಭಯ ತಾಲೂಕಿನಲ್ಲಿ ಒಟ್ಟು 400 ಶಿಬಿರಗಳು ಮುಂದಿನ 2 ತಿಂಗಳಲ್ಲಿ ನಡೆಯಲಿದ್ದು, 40 ಮಂದಿ ತಜ್ಞ ವೈದ್ಯರ ತಂಡ ಕಾರ್ಯನಿರ್ವಹಿಸಲಿದೆ" ಎಂದರು.
ಜಿಲ್ಲಾ ಪಂಚಾಯತ್ ನಿಕಟಪೂರ್ವ ಮಾಜಿ ಸದಸ್ಯ ಉದಯ ಎಸ್.ಕೋಟ್ಯಾನ್, ಸುಮಿತ್ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಕೃಷ್ಣಾನಂದ ಶೆಟ್ಟಿ ಉಪಸ್ಥಿತರಿದ್ದರು.