ಉಡುಪಿ, ಜೂ 25 (DaijiworldNews/PY): "ಕೊಡವೂರು ಗ್ರಾಮದ ಸರ್ವೆ ನಂ 53/6ರಲ್ಲಿ 0.67 ಸೆಂಟ್ಸ್ ಜಾಗ ಕೊಡವೂರು ಕಲ್ಮತ್ ಮಸೀದಿ ಹೆಸರಿಗೆ 2020ರಲ್ಲಿ ಈಗಿನ ಬಿಜೆಪಿ ಸರಕಾರ ಇರುವ ಸಂದರ್ಭದಲ್ಲಿಯೇ ಗಜೆಟ್ ನೋಟಿಫಿಕೇಶನ್ ಆಗಿದೆ" ಎಂದು ಮಸೀದಿ ಪರ ಕಾನೂನು ಹೋರಾಟ ಮಾಡುತ್ತಿರುವ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಇದರ ಜಿಲ್ಲಾಧ್ಯಕ್ಷ ಹುಸೇನ್ ಕೋಡಿಬೆಂಗ್ರೆ ತಿಳಿಸಿದ್ದಾರೆ.
"ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯಿಂದ ಎಲ್ಲ ರೀತಿಯ ಕಾನೂನಾತ್ಮಕ ಪ್ರಕ್ರಿಯೆ ಮಾಡಿಯೇ ಗಜೆಟ್ ನೋಟಿಫಿಕೇಶನ್ ಮಾಡಲಾಗಿದೆ. ಇದಕ್ಕೆ ಬೇಕಾದ ಎಲ್ಲ ದಾಖಲೆಗಳು ವಕ್ಫ್ ಇಲಾಖೆ ಹಾಗೂ ಬೋರ್ಡ್ ಮತ್ತು ಕಂದಾಯ ಇಲಾಖೆಯಲ್ಲಿವೆ" ಎಂದಿದ್ದಾರೆ.
"ಇಷ್ಟೆಲ್ಲ ಕಾನೂನೂ ಪಾಲನೆ ಮಾಡಿಯೂ ಮಸೀದಿಗೆ ಸಂಬಂಧಪಡದವರು ಕಾನೂನು ಬಾಹಿರವಾಗಿ ಮನವಿ ಕೊಟ್ಟಿದ್ದಾರೆ. ಈ ಕಾನೂನು ಬಾಹಿರ ನಡೆಗೆ ಉಡುಪಿ ಜಿಲ್ಲಾಧಿಕಾರಿ ಕೂಡ ಸಾಥ್ ನೀಡಿದ್ದಾರೆ. ಆ ಮೂಲಕ ಈ ವಕ್ಫ್ ಆಸ್ತಿಯನ್ನು ಸರಕಾರದ ಹೆಸರಿಗೆ ಮಾಡಿಕೊಂಡಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ. ಇದರಲ್ಲಿ ನಮಗೆ ಖಂಡಿತವಾಗಿಯೂ ನ್ಯಾಯ ಸಿಗುವ ಆಶಯ ಇದೆ" ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.