ಉಡುಪಿ, ಜೂ 25 (DaijiworldNews/PY): "ಕೊಡವೂರು ಕಲ್ಮತ್ ಮಸೀದಿಗೆ ಮಂಜೂರು ಮಾಡಿದ ಸರ್ಕಾರಿ ಜಾಗ ಮರಳಿ ಸರ್ಕಾರದ ವಶಕ್ಕೆ ಪಡೆಯುವಂತೆ ಕಂದಾಯ ಸಚಿವ ಆರ್ ಅಶೋಕ್ ಅಧಿಸೂಚನೆ ಹೊರಡಿಸಿದ್ದಾರೆ" ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿ ತಾಲೂಕು ಕೊಡವೂರು ಗ್ರಾಮದ ಸರ್ವೆ ನಂ 53/6 ರಲ್ಲಿ 0.67 ಸೆಂಟ್ಸ್ ಜಾಗವನ್ನು ವಕ್ಫ್ ಬೋರ್ಡ್ ಮುಖೇನ ಕಲ್ಮತ್ ಮಸೀದಿ, ಪಳ್ಳಿ ಜಿಡ್ಡ, ಕೊಡವೂರು ಇವರ ಹೆಸರಿಗೆ ಮಂಜೂರು ಮಾಡಲಾಗಿತ್ತು. ಈ ಬಗ್ಗೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಸಕ ಕೆ ರಘುಪತಿ ಭಟ್ ಅವರು ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಭೇಟಿಯಾಗಿ ಸ್ಥಳೀಯ ಸ್ಥಿತಿಗತಿಯನ್ನು ಮನವರಿಕೆ ಮಾಡಿ ಈ ಜಾಗವನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಲಾಗಿದ್ದು, ಅದನ್ನು ಮರಳಿ ಸರಕಾರದ ವಶಕ್ಕೆ ಪಡೆಯುವಂತೆ ಮನವಿ ಮಾಡಿದ್ದರು.
ಅದರಂತೆ, ಇದೀಗ "ಕಂದಾಯ ಸಚಿವರ ಸೂಚನೆ ಮೇರೆಗೆ ಉಡುಪಿ ಜಿಲ್ಲಾಧಿಕಾರಿಯವರು ಸ್ಥಳೀಯ ಸ್ಥಿತಿಗತಿಗಳ ವರದಿಯನ್ನು ಸಲ್ಲಿಸಿರುವಂತೆ ಈ ಜಾಗವನ್ನು ಮರಳಿ ಸರಕಾರದ ವಶಕ್ಕೆ ಪಡೆದು ಜೂನ್ 22ರಂದು ಸರ್ಕಾರದ ಹೆಸರಿಗೆ ಅಧಿಸೂಚನೆ ಹೊರಡಿಸಲಾಗಿದೆ" ಎಂದು ಶಾಸಕ ರಘುಪತಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2018 ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಿನ ಜಿಲ್ಲಾಧಿಕಾರಿಯವರು ಈ ಜಾಗವನ್ನು ವಕ್ಫ್ ಬೋರ್ಡ್ ಮುಖೇನ ಕಲ್ಮತ್ ಮಸೀದಿ ಇವರ ಹೆಸರಿಗೆ ಮಂಜೂರು ಮಾಡಲು ಶಿಫಾರಸ್ಸು ಮಾಡಿರುತ್ತಾರೆ ಎಂದು ಆರೋಪಿಸಿ ಸ್ಥಳೀಯರು ಸೇರಿದಂತೆ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದರು.