ಉಡುಪಿ, ಜೂ.25 (DaijiworldNews/HR): ಸಿಟಿ, ಸರ್ವಿಸ್ ಮತ್ತು ಎಕ್ಸ್ಪ್ರೆಸ್ ಬಸ್ಗಳು ಜುಲೈ 1 ರಿಂದ ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಣೆ ಆರಂಭಿಸಲಿವೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಖಾಸಗಿ ಬಸ್ ಮಾಲೀಕರೊಂದಿಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸಭೆ ನಡೆಸಲಾಗಿದ್ದು, ಜುಲೈ 1 ರಿಂದ ಜಿಲ್ಲೆಯಲ್ಲಿ ಬಸ್ ಸೇವೆ ಪ್ರಾರಂಭಿಸಲು ತೀರ್ಮಾನಿಸಲಾಯಿತು. ಶಾಸಕ ರಘುಪತಿ ಭಟ್ ಮತ್ತು ಉಡುಪಿ ಡಿಸಿ ಜಿ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು.
ಈ ಕುರಿತು ದೈಜಿವರ್ಲ್ಡ್ ಜೊತೆ ಮಾತನಾಡಿದ ಉಡುಪಿ ಸಿಟಿ ಬಸ್ ಮಾಲಿಕರ ಸಂಘದ ಅಧ್ಯಕ್ಷ್ಯರಾದ ಕುಯಿಲಾಡಿ ಸುರೇಶ್ ನಾಯಕ್, "ಜುಲೈ 1 ರಿಂದ ಜಿಲ್ಲೆಯಲ್ಲಿ ಬಸ್ ಕಾರ್ಯಾಚರಣೆಯನ್ನು ಪ್ರಾರಂಭಿಸಲು ನಾವು ನಿರ್ಧರಿಸಿದ್ದೇವೆ. ಎಲ್ಲಾ ಕೊರೊನಾ ಪ್ರೋಟೋಕಾಲ್ ಅನ್ನು ಅನುಸರಿಸಲಾಗುವುದು. ಬಸ್ನಲ್ಲಿ ಕೇವಲ 50% ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಒದಗಿಸಲಾಗುವುದು. ಬಸ್ ಶುಲ್ಕವನ್ನು 25% ಹೆಚ್ಚಿಸಲಾಗುವುದು. ಜುಲೈ 1 ರಂದು ಸುಮಾರು 30% ಬಸ್ಸುಗಳು ರಸ್ತೆಯಲ್ಲಿರುತ್ತವೆ" ಎಂದು ಹೇಳಿದರು.
ಉಡುಪಿ ಆರ್ಟಿಒ ಜೆಪಿ ಗಂಗಾಧರ್ ಮಾತನಾಡಿ, "ಬಸ್ಗಳು 50% ಪ್ರಯಾಣಿಕರನ್ನು ಕೊಂಡೊಯ್ಯಲು ಅನುಮತಿ ಇರುವ ಕಾರಣದಿಂದಾಗಿ ದರ ಹೆಚ್ಚಳದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದೆವೆ. ಇದು ಕೋವಿಡ್ -19 ಸಮಯದ ಅವಧಿಯಲ್ಲಿ ಮಾತ್ರ ಅನ್ವಯವಾಗುತ್ತದೆ. ಬಸ್ಗಳಲ್ಲಿ 100% ಪ್ರಯಾಣಿಕರಿಗೆ ಪ್ರಯಾಣ ನಡೆಸಲು ಅನುಮತಿಸಿದ ನಂತರ ದರಗಳು ಕಡಿಮೆಯಾಗುತ್ತವೆ" ಎಂದರು
ಎಡಿಸಿ ಸದಾಶಿವ ಪ್ರಭು, ರಾಜ್ಯ ಬಸ್ ಮಾಲೀಕರ ಒಕ್ಕೂಟದ ಸದಸ್ಯ ಸದಾನಂದ ಚಾತ್ರ ಮತ್ತು ಇತರರು ಉಪಸ್ಥಿತರಿದ್ದರು.