ಉಡುಪಿ, ಜೂ.25 (DaijiworldNews/HR): ಮಂಗಳೂರಿನಲ್ಲಿ ಕೆಲಸ ಕಳೆದುಕೊಂಡು ವೇತನ ಕೂಡ ಸಿಗದೆ ಅಸಹಾಯಕರಾಗಿ ಉಡುಪಿ ನಗರ ಬಸ್ ನಿಲ್ದಾಣದಲ್ಲಿ ಮಗು ಸಹಿತ ದಂಪತಿಗಳು ದುಃಖಿತರಾಗಿದ್ದವರನ್ನು ಗಮನಿಸಿದ ವಿಶು ಶೆಟ್ಟಿಯವರು ರಕ್ಷಿಸಿ ಮಗು ಮತ್ತು ತಾಯಿಯನ್ನು ತಾತ್ಕಾಲಿಕವಾಗಿ ಸಖಿ ಒನ್ ಸ್ಟಾಪ್ ಸೆಂಟರ್ನಲ್ಲಿ ಆಶ್ರಯ ಕಲ್ಪಿಸಿದ್ದಾರೆ.
ಅಸಹಾಯಕರಿಗೆ ಎಂದಿನಂತೆ ರಾತ್ರಿಯ ಊಟ ವಿತರಿಸಿ ಸಂಧರ್ಭದಲ್ಲಿ ಉಡುಪಿ ಬಸ್ ನಿಲ್ದಾಣದಲ್ಲಿ ದುಃಖಿತರಾಗಿದ್ದ ದಂಪತಿ ಮಗುವನ್ನು ಗಮನಿಸಿ ವಿಚಾರಿಸಿದ ವಿಶು ಶೆಟ್ಟಿಯವರು, ತಾವು ಗದಗ ಜಿಲ್ಲೆಯವರಾಗಿದ್ದು, ದಂಪತಿ ಮಂಗಳೂರು ಜಿಲ್ಲೆಯಲ್ಲಿ ಒಬ್ಬರ ಮನೆಯಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದು, ಇದೀಗ ಲಾಕ್ಡೌನ್ ಸಂಧರ್ಭದಲ್ಲಿ ವೇತನವನ್ನು ನೀಡದೆ ಕೆಲಸದಿಂದ ತೆಗೆದು ಹಾಕಿದ್ದರು. ಅಲ್ಲಿಂದ ಮಂಗಳೂರು ಬಸ್ ನಿಲ್ದಾಣಕ್ಕೆ ಬಂದಾಗ ಅಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಉಡುಪಿಗೆ ಹೋಗಲು ಹೇಳಿ ಬಸ್ ಟಿಕೆಟ್ ಗೆ ಹಣವನ್ನು ನೀಡಿ ಕಳುಹಿಸಿದ್ದಾರೆ ಎಂದರು.
ಇನ್ನು ಊರಿಗೆ ಹೋಗಲು ಬಸ್ ಕೂಡ ಇಲ್ಲದೆ, ಉಡುಪಿಯಲ್ಲಿ ಯಾವುದೇ ಕೆಲಸವೂ ಸಿಗದೆ ಅತಂತ್ರರಾಗಿ ಬಸ್ ನಿಲ್ದಾಣದಲ್ಲಿ ಪತ್ನಿ ಮಗುವಿನೊಂದಿಗೆ ದುಃಖಿತರಾಗಿದ್ದರು.
ವಿಷಯ ತಿಳಿದ ವಿಶು ಶೆಟ್ಟಿಯವರು ಊಟ ನೀಡಿ ಸಂತೈಸಿ, ಮಗು ಮತ್ತು ಮಹಿಳೆಯನ್ನು ಸಖಿ ಒನ್ ಸ್ಟಾಪ್ ಸೆಂಟರ್ಗೆ ದಾಖಲಿಸಿ ಕರಿಬಸಪ್ಪನಿಗೆ ತನ್ನ ವರ್ಕ್ ಶಾಪ್ ನಲ್ಲಿ ರಾತ್ರಿ ಕಳೆಯಲು ಅವಕಾಶ ಮಾಡಿ ಕೊಟ್ಟಿದ್ದಾರೆ.
ಉಡುಪಿಯಲ್ಲಿ ಕೆಲಸ ಸಿಕ್ಕಿದರೆ ಇಲ್ಲಿಯೇ ಉಳಿಯುತ್ತೇನೆ, ಇಲ್ಲದಿದ್ದರೆ ಊರಿಗೆ ಹೋಗಲು ಸಹಕರಿಸಬೇಕಾಗಿ ವಿಶು ಶೆಟ್ಟಿಯವರಲ್ಲಿ ವಿನಂತಿ ಮಾಡಿದ್ದು, ಬಸ್ ಚಲಾವಣೆ ಆದ ಕೂಡಲೇ, ವಿಶು ಶೆಟ್ಟಿಯವರು ಊರಿಗೆ ಕಳುಹಿಸಿ ಕೊಡುವ ಭರವಸೆ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಕೃಷ್ಣ ಅಮೀನ್ ಮೂಡುಬೆಟ್ಟು ಅವರು ಸಹಕರಿಸಿದ್ದಾರೆ.