ಕಾಸರಗೋಡು, ಜೂ 24 (DaijiworldNews/PY): ಕಳೆದ ವಾರದ ಕೊರೊನಾ ಸೋಂಕು ಖಚಿತ ಗಣನೆಯಲ್ಲಿ ಶೇ,24ಕ್ಕಿಂತ ಅಧಿಕ ಕಂಡುಬಂದಿರುವ ಮಧೂರು ಮತ್ತು ಅನಾನೂರು ಗ್ರಾಮ ಪಂಚಾಯತ್ಗಳಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
ಪ್ರಾತಿನಿಧಿಕ ಚಿತ್ರ
ಆನ್ ಲೈನ್ ಮೂಲಕ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಕೊರೊನಾ ಕೋರ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
"ಮಧೂರು ಗ್ರಾಮ ಪಂಚಾಯತ್ ಕಾಸರಗೋಡು ನಗರಸಭೆಯ ಮತ್ತು ಅಜಾನೂರು ಗ್ರಾಮ ಪಂಚಾಯತ್ ಕಾಞಂಗಾಡು ನಗರಸಭೆಯ ಸಮೀಪ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಜನಸಂಖ್ಯೆ ಅಧಿಕವಿರುವ ಪ್ರದೇಶಗಳಿಗೆ ರೋಗ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಾಗರೂಕತೆ ಪಾಲಿಸಬೇಕು. ಈ ನಿಟ್ಟಿನಲ್ಲಿ ಉಭಯ ಪ್ರದೇಶಗಳಲ್ಲಿ ತಿರುವುಗಳು ಮತ್ತು ಸಂಬಂಧಿ ರಸ್ತೆಗಳು ಅಧಿಕವಿರುವುದರಿಂದ ಅಲ್ಲಿನ ಕಟ್ಟುನಿಟ್ಟುಗಳಿಗೆ ಸಾರ್ವಜನಿಕರು ಸಹಕರಿಸಬೇಕು" ಎಂದು ಜಿಲ್ಲಾಧಿಕಾರಿ ತಿಳಿಸಿದರು.
"ಮಧೂರು ಮತ್ತು ಅಜಾನೂರಿನ ಪ್ರಧಾನ ರಸ್ತೆಗಳಲ್ಲಿ ಪೊಲೀಸರು ಬಾರಿಕೇಡ್ ಸ್ಥಾಪಿಸಲಿದ್ದು, ನಿಗಾದಲ್ಲಿರಬೇಕಾದವರು ಸಾರ್ವಜನಿಕ ಪ್ರದೇಶಗಳಲ್ಲಿ ಅಡ್ಡಾಡುತ್ತಿದ್ದಾರೋ ಎಂಬ ಪತ್ತೆಗೆ ಮಹಿಳಾ ಪೊಲೀಸ್ ಸಿಬ್ಬಂದಿ ಸಹಿತ ಬೈಕ್ ಗಸ್ತು ನಡೆಯಲಿದೆ. ವಾಹನಗಳ ಸಂಚಾರವನ್ನು ಪೂರ್ಣರೂಪದಲ್ಲಿ ನಿಯಂತ್ರಿಸಲಾಗುವುದು" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್ ತಿಳಿಸಿದರು.
"ಜಿಲ್ಲೆಯಲ್ಲಿ ಕೊರೊನಾ ತಪಾಸಣೆ ಹಲವು ಪಟ್ಟು ಅಧಿಕವಾಗಿ ನಡೆಯುತ್ತಿದೆ. ಪ್ರತಿದಿನ ಸರಾಸರಿ 4200 ತಪಾಸಣೆ ನಡೆಸಲು ಸಾಧ್ಯವಾಗುತ್ತಿದೆ" ಎಂದು ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಕೆ.ಆರ್.ರಾಜನ್ ತಿಳಿಸಿದರು.
ಕಾಞಂಗಾಡಿನ ಅಮ್ಮ-ಮಗು ಆಸ್ಪತ್ರೆಯಲ್ಲಿ 85 ಬೆಡ್ಗಳಲ್ಲಿ ಆಕ್ಸಿಜನ್ ಪೈಪ್ ಲೈನ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಇಲ್ಲಿ ಬಾಕಿಯುಳಿದಿರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಇಂಜಿನಿಯರ್ ಅವರಿಗೆ ಆದೇಶ ನೀಡಲಾಗಿದೆ. ಜಿಲ್ಲಾ ಆಸ್ಪತ್ರೆಗೆ ಸಂಬಂಧಿಸಿದ ಆರ್ದ್ರಂ ಕಟ್ಟಡವನ್ನು ತುರ್ತಾಗಿ ಸಜ್ಜುಗೊಳಿಸಲಾಗುವುದು. ಒಂದೊಮ್ಮೆ ಕೊರೊನಾ ಮೂರನೇ ಅಲೆ ಆರಂಭಗೊಂಡರೂ, ಪ್ರತಿರೋಧ ನಡೆಸುವ ನಿಟ್ಟಿನಲ್ಲಿ ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆ, ಜನರಲ್ ಆಸ್ಪತ್ರೆ ಇತ್ಯಾದಿಗಳ ಚಟುವಟಿಕೆಗಳನ್ನು ಸಶಕ್ತಗೊಳಿಸಲು ತೀರ್ಮಾನಿಸಲಾಗಿದೆ.
ಜಿಲ್ಲೆಯ ರೋಗ ಖಚಿತತೆಯ ಹಿನ್ನೆಲೆಯಲ್ಲಿ ಎ, ಬಿ, ಕ್ಯಾಟಗರಿಯಲ್ಲಿರುವ ಸ್ಥಳೀಯಾಡಳಿತ ಸಂಸ್ಥೆ ವ್ಯಾಪ್ತಿಯ ಸಾರ್ವಜನಿಕ ಕಲಿಕಾ ಕೇಂದ್ರಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಚಟುವಟಿಕೆ ನಡೆಸಬಹುದಾಗಿದೆ ಎಂದು ಸಭೆ ತಿಳಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಗರಿಷ್ಠ 20 ಮಂದಿಗೆ ಮಾತ್ರ ಇಲ್ಲಿ ಅನುಮತಿಯಿರುವುದು. ಒಬ್ಬರಿಂದ ಮತ್ತೊಬ್ಬರಿಗೆ ಕುಳಿತುಕೊಳ್ಳುವ ಆಸನದಲ್ಲಿ 41 ಚದರ ಅಡಿಯ ಅಂತರ ಕಡ್ಡಾಯವಾಗಿದೆ.
ತೆಕ್ಕಿಲ್ ನ ಟಾಟಾ ಕೊರೊನಾ ಆಸ್ಪತ್ರೆಯ ಮಲೀನ ಜಲ ಸಮಸ್ಯೆಗೆ ತುರ್ತಾಗಿ ಪರಿಹಾರ ಕಂಡುಕೊಳ್ಳುವಂತೆ ಸಭೆ ಆದೇಶ ನೀಡಿದೆ. ಜಿಲ್ಲೆಯಲ್ಲಿ ಆಹಾರ ಕಿಟ್ ವಿತರಣೆ ಸುಸೂತ್ರವಾಗಿ ನಡೆಯುತ್ತಿದೆ. ಶಿಶು ಸಂರಕ್ಷಣೆ ಕೇಂದ್ರಗಳಲ್ಲೂ ಕಿಟ್ ವಿತರಣೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಸಮಾಜನೀತಿ ಇಲಾಖೆಯ ವ್ಯಾಪ್ತಿಯಲ್ಲಿ ಇತರ ರಾಜ್ಯಗಳ ಕಾರ್ಮಿಕರ, ಮೀನುಗಾರರ, ವಯೋವೃದ್ಧರಿಗಿರುವ ಕಿಟ್ ವಿತರಣೆ ಪೂರ್ಣಗೊಂಡಿದೆ. 18ರಿಂದ 44 ವರ್ಷದ ನಡುವಿನ ವಯೋಮಾನದವರ ವಾಕ್ಸಿನೇಷನ್ ಚುರುಕುಗೊಳಿಸಲು ಸಭೆ ತೀರ್ಮಾನಿಸಿದೆ.
ಹೆಚ್ಚುವರಿ ದಂಡಾಧಿಕಾರಿ ಅತುಲ್ ಎಸ್.ನಾಥ್, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಜಿಲ್ಲಾ ಸಪ್ಲೈ ಅಧಿಕಾರಿ ಕೆ.ಎನ್.ಬಿಂದು, ಜಿಲ್ಲಾ ಉದ್ದಿಮೆ ಕೇಂದ್ರ ಪ್ರಭಾರ ಪ್ರಧಾನ ಪ್ರಬಂಧಕ ಸಜಿತ್ ಕುಮಾರ್, ಜಿಲ್ಲಾ ಸಮಾಜ ನೀತಿ ಅಧಿಕಾರಿ ಷೀಬಾ ಮುಂತಾಝ್, ಶಿಶು ಸಂರಕ್ಷಣೆ ಅಧಿಕಾರಿ ಸಿ.ಎ.ಬಿಂದು, ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಸಾಜು, ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಎಸ್.ಮೀನಾರಾಣಿ ಮೊದಲಾದವರು ಉಪಸ್ಥಿತರಿದ್ದರು.