ಉಡುಪಿ, ಜೂ 24 (DaijiworldNews/PY): ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇಂಧನ ಬೆಲೆ, ಪೆಟ್ರೊಲ್, ಡೀಸೆಲ್, ವಿದ್ಯುತ್ ದರ ಸೇರಿದಂತೆ ಅನೇಕ ವಸ್ತುಗಳ ದರವನ್ನು ಏರಿಕೆ ಮಾಡಿರುವುದನ್ನು ವಿರೋಧಿಸಿ ಜಾತ್ಯಾತಿತ ಜನತಾದಳ ಪಕ್ಷದ ವತಿಯಿಂದ ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆಯನ್ನು ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ, "ಸರಕಾರವು ದರ ಏರಿಕೆಯನ್ನು ಮಾಡುವ ಮೊದಲು ರಾಜಕೀಯ ಕಾರ್ಯಕ್ರಮಗಳನ್ನು ಮಾಡುತ್ತ ಬಂದರು. ರಾಜಕೀಯ ಸ್ವಾರ್ಥಕೋಸ್ಕರ ಜನರನ್ನು ಇಂತಹ ಪರಿಸ್ಥಿಗೆ ತಂದಿದ್ದಾರೆ. ಈ ಮೊದಲೇ ಕಠಿಣ ಕ್ರಮವನ್ನು ತೆಗೆದುಕೊಂಡಿದ್ದರೆ ಹಲವಾರು ಜನರನ್ನು ಬದುಕಿಸಿಕೊಳ್ಳಬಹುದಿತ್ತು ಹಾಗೂ ಕೊರೊನಾದಿಂದ ಮುಕ್ತರಾಗಿಸಬಹುದಿತ್ತು .ಆದರೆ ಇಂದಿನ ದಿನಗಳಲ್ಲಿ ಪೆಟ್ರೊಲ್, ಡೀಸೆಲ್ ಮುಂತಾದ ಇಂಧನಗಳ ಬೆಲೆಯನ್ನು ಏರಿಸಿ ಜನರನ್ನು ಕಷ್ಟದ ಪರಿಸ್ಥಿಗೆ ತಂದೊಡ್ಡಿದ್ದಾರೆ. ಇನ್ನಾದರು ಎಚ್ಚೆತ್ತು ಇಂಧನಗಳ ದರವನ್ನು ಇಳಿಕೆ ಮಾಡುವ ಪ್ರಯತ್ನವನ್ನು ಸರಕಾರ ಮಾಡಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ, ಜನರು ಬೇರೆ ಸರಕಾವನ್ನು ಅಧಿಕಾರಕ್ಕೆ ತರಲಿದ್ದಾರೆ" ಎಂದರು.
ಬಳಿಕ, ಇಂಧನ ದರಗಳನ್ನು ಕಡಿಮೆಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಪಕ್ಷದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಜಯರಾಂ ಆಚಾರ್ಯ, ಪ್ರಮುಖರಾದ ಗಂಗಾಧರ ಬಿರ್ತಿ, ಮನ್ಸೂರ್ ಇಬ್ರಾಹಿಂ, ಜಯಕುಮಾರ್ ಪರ್ಕಳ, ಪ್ರಕಾಶ್ ಶೆಟ್ಟಿ, ಪಾಲ್ಗೊಂಡಿದ್ದರು.