ಮಂಗಳೂರು, ಜೂ 24(DaijiworldNews/PY): ಮಂಗಳೂರು ಹಾಗೂ ಪುತ್ತೂರು ಕೆಎಸ್ಆರ್ಟಿಸಿ ವಿಭಾಗದಿಂದ ಜೂನ್ 23ರ ಬುಧವಾರದಂದು ಸುಮಾರು 140 ಬಸ್ಗಳು ಓಡಾಟ ನಡೆಸಿದ್ದು. ಆದರೆ, ಬಸ್ ಸೇವೆ ಬಳಸಿದ ಪ್ರಯಾಣಿಕ ಸಂಖ್ಯೆ ಇಡಿಮೆ ಇತ್ತು.
ಪ್ರಾತಿನಿಧಿಕ ಚಿತ್ರ
ದ.ಕ ಜಿಲ್ಲೆಯಲ್ಲಿ ಬುಧವಾರದಿಂದ ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದರೂ, ಖಾಸಗಿ ಬಸ್ಗಳು ಕಾರ್ಯನಿರ್ವಹಿಸಿಲ್ಲ. ಆದರೆ, ನಗರದ ಕೆಎಸ್ಆರ್ಟಿಸಿಯ ಮೂರು ಡಿಪೋಗಳಿಂದ ಸುಮಾರು 140 ಬಸ್ಗಳು ಸಂಚರಿಸಿವೆ.
ದ.ಕ ಜಿಲ್ಲೆಯೊಳಗೆ ಮಧ್ಯಾಹ್ನ 1 ಗಂಟೆಯವರೆಗೆ ಬಸ್ಸುಗಳು ಕಾರ್ಯನಿರ್ವಹಿಸಿವೆ. ಅಂತರ್ ಜಿಲ್ಲೆಗಳಲ್ಲಿ ರಾತ್ರಿಯವರೆಗೂ ಸೀಮಿತ ಸಂಖ್ಯೆಯಲ್ಲಿ ಬಸ್ ಓಡಾಟ ನಡೆಸಿವೆ. ಪುತ್ತೂರು ಹಾಗೂ ಮಂಗಳೂರು ಕೆಎಸ್ಆರ್ಟಿಸಿ ವಿಭಾಗದಿಂದ ಉಪ್ಪಿನಂಗಡಿ, ಧರ್ಮಸ್ಥಳ, ವಿಟ್ಲ, ಸುಬ್ರಹ್ಮಣ್ಯ ಸಹಿತ ಹೊರ ಜಿಲ್ಲೆಗಳಾದ ಉಡುಪಿ, ಬೆಂಗಳೂರು, ಬಾಗಲಕೋಟೆ, ಹುಬ್ಬಳ್ಳಿ, ಮೈಸೂರು ಸೇರಿದಂತೆ ವಿವಿಧ ಕಡೆಗಳಿಗೆ ಬಸ್ ಕಾರ್ಯಾಚರಣೆ ನಡೆಸಿವೆ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಕ ಅರುಣ್ ಹೇಳಿದ್ದಾರೆ.
"ಪುತ್ತೂರು, ಧರ್ಮಸ್ಥಳ, ಸುಳ್ಯ ಹಾಗೂ ಬಿ.ಸಿ ರೋಡ್ನ 37 ಬಸ್ಗಳ ರಸ್ತೆಗಿಳಿದಿದ್ದವು. ಬುಧವಾರ ರಾತ್ರಿ ಸುಮಾರು ಹತ್ತು ಬಸ್ಗಳು ಬೆಂಗಳೂರು, ಹೊಸಪೇಟೆ ಹಾಗೂ ಶಿವಮೊಗ್ಗಕ್ಕೆ ತೆರಳಿವೆ. ಪ್ರಯಾಣಿಕರ ಅಗತ್ಯತೆಗಳಿಗೆ ಅನುಗುಣವಾಗಿ ಸ್ಥಳೀಯ ಮಾರ್ಗಗಳಲ್ಲಿ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಸಾಧ್ಯವಾದಲ್ಲಿ ಗುರುವಾರ ಹತ್ತು ಹೆಚ್ಚುವರಿ ಬಸ್ಗಳನ್ನು ಓಡಿಸಲಾಗುವುದು" ಎಂದು ಪುತ್ತೂರು ವಿಭಾಗೀಯ ನಿಯಂತ್ರಕ ಜಯಕರ ಶೆಟ್ಟಿ ತಿಳಿಸಿದ್ದಾರೆ.