ಉಳ್ಳಾಲ, ಜೂ 24(DaijiworldNews/PY): ಸೋಮೇಶ್ವರ ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂನ್ 23ರ ಬುಧವಾರ ನಡೆದಿದೆ.
ಸೋಮೇಶ್ವರ ಪುರಸಭೆ ಬಳಿ ನಿವಾಸಿ ಪವನ್ ಭಟ್ (29) ಎಂದು ಗುರುತಿಸಲಾಗಿದೆ.
ಮೈಸೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ ಪವನ್ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ನಡೆಸಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾನ್ವಿತನಾಗಿದ್ದ ಪವನ್ ಉತ್ತಮ ಹಾಡುಗಾರ ಹಾಗೂ ಗಿಟಾರ್ ನುಡಿಸುತ್ತಿದ್ದ ಎನ್ನಲಾಗಿದೆ.
ಕೊರೊನಾ ಹಿನ್ನಲೆಯಲ್ಲಿ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದ ಈತ ಮಾನಸಿಕವಾಗಿ ಕುಗಿದ್ದು, ಪ್ರತೀ ದಿನ ಸೋಮೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದರು. ಬುಧವಾರವೂ ದೇವಸ್ಥಾನಕ್ಕೆ ತೆರಳಿ ಬಳಿಕ ರುದ್ರಪಾದೆಯ ಮೇಲೆ ಹೋಗಿದ್ದಾರೆ. ಅಲ್ಲಿಂದ ಆತ್ಮಹತ್ಯೆಗೈದಿದ್ದು, ಸ್ಥಳೀಯರು ನೋಡಿ ಜೀವರಕ್ಷಕ ಈಜುಗಾರರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಆಗಮಿಸಿದಾಗ ಪವನ್ ಮೃತದೇಹ ಸಮುದ್ರದ ಅಲೆಯಲ್ಲಿ ಸಿಲುಕಿತ್ತು. ಪೊಲೀಸರ ಮಾಹಿತಿಯಂತೆ ಗೃಹರಕ್ಷಕದಳದ ಸಿಬಂದಿ ಪ್ರಸಾದ್ ಮೊಗವೀರಪಟ್ಣ, ಸಾಗರ್ ಮೊಗವೀರಪಟ್ಣ, ಕರಾವಳಿ ಕಾವಲು ಪಡೆಯ ಸ್ಥಳೀಯ ಈಜುಗಾರರಾದ ಮೋಹನ್ ಮತ್ತು ಸುಜಿತ್, ದೇವಸ್ಥಾನ ಸಿಬಂದಿ ವಿನಾಯಕ್ ಮೃತದೇಹವನ್ನು ಮೇಲಕೆತ್ತಲು ಸಹಕರಿಸಿದರು.
ಮೃತ ಪವನ್ ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821