ಮಂಗಳೂರು, ಜೂ 23 (DaijiworldNews/PY): "ಸರ್ಕಾರದ ಸಿಗುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢರಾಗಬೇಕು" ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದರು.
ಅವರು ಇಂದು ಡಾ.ದಯಾನಂದ ಪೈ-ಸತೀಸ್ ಪೈ ಕಾಲೇಜಿನ ಸಭಾಂಗಣದಲ್ಲಿ ನಡೆದ ಡಾ.ದಯಾನಂದ ಪೈ-ಸತೀಸ್ ಪೈ ಕಾಲೇಜಿನ 784 ಹಾಗೂ ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ 251 ವಿದ್ಯಾರ್ಧಿಗಳಿಗೆ ಕೊಡಲ್ಪಡುವ ಟ್ಯಾಬ್ ಅನ್ನು ಸಾಂಕೇತಿಕವಾಗಿ ಎರಡು ಕಾಲೇಜಿನ 10 ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.
"ಕೊರೊನಾ ಹಿನ್ನೆಲೆ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಕರ್ನಾಟಕ ಎಲ್.ಎಂ.ಎಸ್ ಆಧಾರಿತ ಡಿಜಿಟಲ್ ಕಲಿಕೆಯ ವ್ಯವಸ್ಥೆಯು ಬೋಧನೆ-ಕಲಿಕೆಗೆ ಹಾಗೂ ಸ್ವ-ಕಲಿಕೆಗೆ ಸಮಗ್ರ ವೇದಿಕೆಯಾಗಿದೆ. ಇದು ಎಲ್ಲರಿಗೂ ಅಗತ್ಯ ಸಮಯ ಮತ್ತು ಸ್ಥಳಗಳಲ್ಲಿ ಡಿಜಿಟಲ್ ಕಲಿಕೆಯ ಸೌಲಭ್ಯವನ್ನು ಒದಗಿಸಲು ಅವಶ್ಯಕವಾಗಿದೆ" ಎಂದರು.
"ಯಾವುದೇ ಸ್ಥಳದಿಂದ 24*7 ಮಾಹಿತಿಯನ್ನು ಪಡೆಯಬಹುದು ಹಾಗೂ ಡಿಜಿಟಲ್ ಕಲಿಕೆಯಿಂದ ಕೌಶಲ್ಯಾಭಿವೃದ್ಧಿ ಹೆಚ್ಚಿಸುವ ಸಾಧ್ಯತೆಗಳಿವೆ. ಇದಲ್ಲದೇ ಪಠ್ಯ, ಆಡಿಯೋ ಮತ್ತು ವಿಡಿಯೋ ಇತ್ಯಾದಿ ಮಾಧ್ಯಮದ ಮೂಲಕ ವಿದ್ಯಾರ್ಥಿಗಳ ಸಮಗ್ರ ಕಲಿಕೆಯಾಗುತ್ತದೆ" ಎಂದರು.
"ಕರ್ನಾಟಕ ಎಲ್.ಎಂ.ಎಸ್ ಆಧಾರಿತ ಡಿಜಿಟಲ್ ಕಲಿಕೆಯಿಂದ ಉತ್ತಮ ಗುಣಮಟ್ಟದ ಬೋಧನೆ, ಕಲಿಕೆ, ನಿರಂತರ ಮೌಲ್ಯಮಾಪನ, ಮಾಹಿತಿಗಳು ಪ್ರಚಲಿತವಾಗಲಿದ್ದು, ಉನ್ನತ ಶಿಕ್ಷಣಕ್ಕೆ ಪೂರ್ಣತೆ ಒದಗಿಸಲಿದೆ. ಈ ವ್ಯವಸ್ಥೆಯಿಂದ ಅರ್ಥಪೂರ್ಣ ಭೋಧನೆ ಮತ್ತು ಆಳವಾದ ಕಲಿಕೆಗೆ ಅನುವು ಮಾಡಿಕೊಡುತ್ತದೆ ಹಾಗೆಯೇ ವಿದ್ಯಾರ್ಥಿಗಳನ್ನು ಜ್ಞಾನದೆಡೆಗೆ ಹಾಗೂ ಉದ್ಯೋಗಸ್ಥರನ್ನಾಗಿಸುವ ಕೆಲಸ ಮಾಡುತ್ತದೆ" ಎಂದರು.
ಸಭೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ವಸಂತರಾಜ್ ಶೆಟ್ಟಿ ಕೆ, ಕದ್ರಿ ವಾರ್ಡ್ನ ಮಹಾನಗರ ಪಾಲಿಕೆಯ ಸದಸ್ಯ ಮನೋಹರ್ ಶೆಟ್ಟಿ ರಥಬೀದಿ ಸರಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ ಹೆಬ್ಬಾರ್.ಸಿ, ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಜಗದೀಶ ಬಾಳಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.