ಕಾರ್ಕಳ, ಜೂ 23 (DaijiworldNews/PY): "ಸರಕಾರದ ಪ್ರಯತ್ನದಿಂದ ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಕ್ಷಯ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, 2025ನೇ ಸಾಲಿನ ಒಳಗೆ ದೇಶದಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡುವಲ್ಲಿ ಸರಕಾರದ ಪ್ರಯತ್ನ ನಡೆದಿದೆ. ಇದಕ್ಕೆ ಸರಕಾರಿ ವೈದ್ಯರೊಂದಿಗೆ ಖಾಸಗಿ ವೈದ್ಯರ ಸಹಕಾರ ಅಗತ್ಯ" ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಶಾಖೆಯ ಅಧ್ಯಕ್ಷ ಡಾ. ಕೆ. ಆರ್. ಜೋಶಿ ಅವರು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಶಾಖೆಯ ವತಿಯಿಂದ ಕ್ಷಯ ರೋಗ ನಿರ್ಮೂಲನಾ ಘಟಕ ಕಾರ್ಕಳ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಕಾರ್ಕಳ ಇವರ ಸಹಕಾರದಲ್ಲಿ ಕಾರ್ಕಳ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜರಗಿದ ತಾಲೂಕಿನ ಆಯ್ದ ಬಡ ಕ್ಷಯ ರೋಗಿಗಳಿಗೆ ಉಚಿತ ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಅವರು ಪ್ರಾಸ್ತಾವನೆಗೈದು, ಕಾರ್ಕಳ ತಾಲೂಕಿನಲ್ಲಿ 755 ಕ್ಷಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಉಚಿತ ಚಿಕಿತ್ಸೆಯ ಜೊತೆಗೆ ಪ್ರತೀ ತಿಂಗಳು 500 ರೂ. ಬೆಲೆಯ ಪೌಷ್ಠಿಕ ಆಹಾರ ನೀಡಲಾಗುತ್ತಿದೆ" ಎಂದರು.
ಸರಕಾರಿ ಆಸ್ಪತ್ರೆಯ ಸರ್ಜನ್ ಡಾ. ಉದಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸುರೇಶ್ ಸ್ವಾಗತಿಸಿ, ಆಸ್ಪತ್ರೆಯ ಕೌನ್ಸೆಲರ್ ಕಿರಣ್ ಬಾಬು ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ್ ವಂದಿಸಿದರು.
ಕಾರ್ಯಕ್ರಮದಲ್ಲಿ ತಲಾ 1,000 ರೂ. ಮೌಲ್ಯದ 60 ಆಯ್ದ ಬಡ ಕ್ಷಯ ರೋಗಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು.
ಆಸ್ಪತ್ರೆಯ ಡಾ. ಅನಂತ್ ಕಾಮತ್, ಹರಿಪ್ರಸಾದ್, ರೆಡ್ ಕ್ರಾಸ್ ಸೊಸೈಟಿಯ ಉಪಾಧ್ಯಕ್ಷ ಶೇಖರ್ ಹೆಚ್., ಕೋಶಾಧಿಕಾರಿ ಐ. ರವೀಂದ್ರನಾಥ್ ಪೈ, ವೈ. ಮೋಹನ್ ಶೆಣೈ, ಇಡ್ಯಾ ಜನಾರ್ದನ, ಲಕ್ಷ್ಮಣ ಶೆಣೈ, ವೃಷಭರಾಜ್ ಕಡಂಬ, ಟಿ. ಜಗದೀಶ್, ಸುರೇಶ್ ಭಟ್, ವಸಂತ್ ಎಂ, ಶೈಲೇಂದ್ರ, ಇಕ್ಬಾಲ್ ಅಹ್ಮದ್, ಲಕ್ಷ್ಮೀ ಆರ್. ಪೈ, ಗೀತಾ, ವಾರಿಜಾ, ರಮಿತಾ, ಮತ್ತು ಶ್ವೇತಾ ಅವರು ಉಪಸ್ಥಿತರಿದ್ದು ಕಿಟ್ ವಿತರಿಸಿದರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಶಾಖೆಯ ಅಧ್ಯಕ್ಷ ಡಾ. ಕೆ. ಆರ್. ಜೋಶಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಉಪಸ್ಥಿತರಿದ್ದರು.