ಉಡುಪಿ,ಜೂ 23 (DaijiworldNews/MS): ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಹೇಳಿಕೆಯೊಂದಕ್ಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿರುಗೇಟು ನೀಡಿದ್ದು, " ನಿಮ್ಮ ಪಕ್ಷದವರು ಆಗಿರುವ ಸಂಸದೆ ಶೋಭಾ ಕರಂದ್ಲಾಂಜೆ ಕೂಡಾ ಪುತ್ತೂರಿನವರೆಂದು ನೆನಪಿರಲಿ.!" ಎಂದು ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, " ಕಾಂಗ್ರೆಸ್ ನಾಯಕರಾದ ವಿನಯ್ ಕುಮಾರ್ ಸೊರಕೆ ಅವರ ಮಾತು ಹಿಡಿತ ತಪ್ಪಿದ್ದರೆ ನಮ್ಮ ಕಾರ್ಯಕರ್ತರು ಅವರನ್ನು ಪುತ್ತೂರಿಗೆ ಹಿಂತಿರುಗುವಂತೆ ಮಾಡಬೇಕಾದಿತು ಎಂಬ ಹೇಳಿಕೆ ನೀಡಿದ್ದರು . ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಅಶೋಕ್ ಕುಮಾರ್ ಕೊಡವೂರು "ಕಾಂಗ್ರೆಸ್ ನಾಯಕರಾದ ವಿನಯ್ ಕುಮಾರ್ ಸೊರಕೆಯವರನ್ನು ಪುತ್ತೂರಿಗೆ ಕಳುಹಿಸುವ ಬಗ್ಗೆ ಮಾತನಾಡಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಅವರು ಇಲ್ಲಿನ ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಪುತ್ತೂರಿನವರು ಎಂಬುವುದನ್ನು ನೆನಪಿಟ್ಟುಕೊಳ್ಳಲಿ" ಎಂದಿದ್ದಾರೆ.
"ಹಿರಿಯ ನಾಯಕರಿಗೆ ಟಾರ್ಗೆಟ್ ಎಂಬ ಪದಪ್ರಯೋಗ ಮಾಡುವುದು ನಿಮಗೆ ಶೋಭೆ ತರುವುದಿಲ್ಲ. ಡಾ.ವಿ.ಎಸ್. ಆಚಾರ್ಯ ಮರಣ ಹೊಂದಿದಾಗ ಕಾಂಗ್ರೆಸ್ ಕಚೇರಿಯಲ್ಲಿ ಸಂತಾಪ ಸಭೆಯನ್ನು ಮಾಡಿದ್ದೇವೆ. ಇದು ನಮ್ಮೊಳಗಿನ ಸೌರ್ಹಾದಯು ಸ್ಪರ್ಧೆಯ ಸಂಕೇತ. ನಾವು ಎಂದಿಗೂ ಒಬ್ಬರ ಸಾವಿನಲ್ಲಿ ರಾಜಕೀಯ ಮಾಡುವುದಿಲ್ಲ, ಅವರ ಪಕ್ಷದ ಸದಾನಂದ ಗೌಡ ಎಲ್ಲಿಯವರು? ಇಲ್ಲಿನ ಶಾಸಕರು ಕೂಡಾ ಪುತ್ತೂರು ಆ ಭಾಗದವರೇ, ಆದರೆ ನಾವು ಎಂದಿಗೂ ಅವರನ್ನು ಅಲ್ಲಿಯವರು, ಇಲ್ಲಿಯವರು ಎಂದು ಮಾತನಾಡಿಲ್ಲ ನಾವು ಅವರನ್ನು ಭಾರತದ ಪ್ರಜೆಗಳು ಎಂದು ಪರಿಗಣಿಸಿದ್ದೇವೆ. ಸೊರಕೆಯವರು ಕಳೆದ 21 ವರ್ಷಗಳಿಂದ ಇಲ್ಲಿನ ಮತದಾರರು, ಇಲ್ಲಿ ಸ್ವಂತ ಮನೆ ಇದೆ ಆದರೂ ನೀವು ಅವರನ್ನು ಅಲ್ಲಿಯವರು ಎನ್ನುತ್ತೀರಿ. ನೀವೇನು ಅಲ್ಲಿ ಮತ್ತು ಇಲ್ಲಿಗೆ ಬಾರ್ಡರ್ ಕಟ್ಟಿದ್ದೀರಾ? ಎಂದು ಪ್ರಶ್ನಿಸಿದರು.
"ಕೋಟ ಶ್ರೀನಿವಾಸ ಪೂಜಾರಿಗಳು ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರು ಅವರು ಉಡುಪಿ ಜಿಲ್ಲೆಯವರು. ಹಾಗೆಂದ ಮಾತ್ರಕ್ಕೆ ಸಚಿವರು ಅಲ್ಲಿ ಹೋಗಿ ಮಾತನಾಡುವಂತಿಲ್ಲವೇ? ಕೊರೊನಾ ಸಂಧರ್ಭದಲ್ಲಿ ಜನರು ಕಷ್ಟದಲ್ಲಿ ಇದ್ದಾಗ ಯಾವ ನಾಯಕರೂ ಜನರೊಂದಿಗೆ ಇರಲಿಲ್ಲ. ವಿನಯ್ ಕುಮಾರ್ ಸೊರಕೆಯವರು ಆಸ್ಪತ್ರೆಯಲ್ಲಿ ಮತ್ತು ಇತರ ಕಡೆಗಳಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ರಾಷ್ಟ್ರಮಟ್ಟ ಪತ್ರಿಕೆಯಲ್ಲಿ ರಾಮ ಮಂದಿರಕ್ಕಾಗಿ ಸಂಗ್ರಹಿಸಿದ ಹಣದ ವಿಚಾರದಲ್ಲಿ ಪ್ರಕಟವಾದ ವರದಿಯನ್ನು ವಿನಯ್ ಕುಮಾರ್ ಸೊರಕೆಯವರು ಹೇಳಿದ್ದೇ ವಿನಹ ಬೇರೆನನ್ನೂ ಅವರು ಮಾತನಾಡಿಲ್ಲ. ನಿಮ್ಮ ಸರಕಾರದಲ್ಲಿ ವಿಚಾರಿಸಿ, ವಿನಯ್ ಕುಮಾರ್ ಸೊರಕೆಯವರು ಮಂತ್ರಿಯಾಗಿದ್ದ ಕಾಲದಲ್ಲಿ ಇಲ್ಲಿನ ದೈವಸ್ಥಾನ, ದೇವಸ್ಥಾನ, ಗರಡಿಗಳಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂದು ಪರಿಶೀಲಿಸಿ ಮತ್ತು ನಿಮ್ಮ ಸರಕಾರ ಎಷ್ಟು ಅನುದಾನ ನೀಡಿದೆ ಎಂದು ಪರಿಶೀಲನೆ ಮಾಡಿ. ಚರ್ಚೆಗೆ ನಾವು ಸಿದ್ದ. ಮುಂದಿನ ದಿನಗಳಲ್ಲಿ ನಿಮ್ಮ ಸ್ಥಾನಕ್ಕೆ ಗೌರವ ಬರುವಂತೆ ಮಾತನಾಡುವುದನ್ನು ಕಲಿಯಿರಿ" ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೋ, ವಕ್ತಾರರಾ ಭಾಸ್ಕರ್ ರಾವ್ ಕಿದಿಯೂರು, ಮುಖಂಡರಾದ ಕೀರ್ತಿ ಶೆಟ್ಟಿ, ಹರೀಶ್ ಶೆಟ್ಟಿ, ಪ್ರಶಾಂತ್ ಜತ್ತನ್ನ, ರೋಶನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.